ವಿಮಾನದಲ್ಲಿ ಪ್ರತಿಭಟನೆ; ಎಲ್ಡಿಎಫ್ ಸಂಚಾಲಕ ಸೇರಿ ಮೂವರಿಗೆ ನಿಷೇಧ ಹೇರಿದ ಇಂಡಿಗೊ
ತಿರುವನಂತಪುರಂ: ಕೇರಳದ ಎಲ್ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಅವರನ್ನು ಮೂರು ವಾರಗಳ ಕಾಲ ಮತ್ತು ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಎರಡು ವಾರಗಳ ಕಾಲ ವಿಮಾನಯಾನ ನಿಷೇಧದ ಪಟ್ಟಿಗೆ ಸೇರಿಸಿರುವುದಾಗಿ ಇಂಡಿಗೊ ಪ್ರಕಟಿಸಿದೆ.
ಜೂನ್ 13ರಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತೀಯ ವಿಮಾನಯಾನ ಸಂಸ್ಥೆ ರಾಜಕಾರಣಿಗಳನ್ನು ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರಿಸಿರುವುದು ಇದೇ ಮೊದಲು.
ಈ ಎರಡೂ ನಿಷೇಧಗಳು ಜುಲೈ 16ರಿಂದ ಪೂರ್ವಾನ್ವಯವಾಗುತ್ತವೆ ಹಾಗೂ ದೇಶೀಯ ಹಾಗೂ ಅಂತರರಾಷ್ಟ್ರೀಯ ಇಂಡಿಗೊ ವಿಮಾನಗಳಿಗೆ ಅನ್ವಯಿಸುತ್ತವೆ.
"ನಾನು ಅಥವಾ ನಮ್ಮ ಕುಟುಂಬ ಸದಸ್ಯರು ಎಂದೂ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ. ನನ್ನ ಗಮ್ಯಸ್ಥಾನಕ್ಕೆ ನಡೆದುಕೊಂಡು ಹೋದರೂ, ಇಂಡಿಗೋ ವಿಮಾನದಲ್ಲಿ ಯಾನ ಮಾಡುವುದಿಲ್ಲ" ಎಂದು ಜಯರಾಜನ್ ಪ್ರತಿಕ್ರಿಯಿಸಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಕುಮಾರ್ ಆರ್.ಕೆ ಮತ್ತು ಫರ್ಸಿನ್ ಮಜೀದ್ ಪಿ.ಪಿ. ಅವರು ಕಣ್ಣೂರಿನಿಂದ ಹೊರಟ ವಿಮಾನದಲ್ಲಿ, ತಿರುವನಂತಪುರದಲ್ಲಿ ವಿಮಾನ ಇಳಿದ ಬಳಿಕ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿದ್ದರು. ಆಗ ಜಯರಂಜನ್ ಈ ಇಬ್ಬರನ್ನು ವಿಮಾನದಲ್ಲಿ ತಳ್ಳಿದ್ದರು ಎಂದು timesofindia.com ವರದಿ ಮಾಡಿದೆ.