ರಾಷ್ಟ್ರಪತಿ ಚುನಾವಣೆ: ಮತ ಎಣಿಕೆ ಇಂದು ಬೆಳಗ್ಗೆ 11ಕ್ಕೆ ಆರಂಭ, ಸಂಜೆ ವೇಳೆ ಫಲಿತಾಂಶ ನಿರೀಕ್ಷೆ
Photo:PTI
ಹೊಸದಿಲ್ಲಿ: ಸೋಮವಾರ(ಜು.18) ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಇಂದು 11 ಗಂಟೆಗೆ ಆರಂಭವಾಗುತ್ತದೆ. ಪ್ರತಿಪಕ್ಷದ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಹಿಂದಿಕ್ಕುವ ನಿರೀಕ್ಷೆಯಲ್ಲಿರುವ ದ್ರೌಪದಿ ಮುರ್ಮು ಅವರ ವಿಜಯವನ್ನು ಆಚರಿಸಲು ಬಿಜೆಪಿ ವ್ಯಾಪಕ ಸಿದ್ಧತೆಗಳನ್ನು ನಡೆಸುತ್ತಿದೆ.
ಸಂಸತ್ ಭವನದಲ್ಲಿ ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸಂಜೆ 4 ಗಂಟೆ ಸುಮಾರಿಗೆ ಫಲಿತಾಂಶ ಬರುವ ನಿರೀಕ್ಷೆ ಇದೆ.
ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮುರ್ಮು ಅವರನ್ನು ತೀನ್ ಮೂರ್ತಿ ಮಾರ್ಗ್ನಲ್ಲಿರುವ ತಾತ್ಕಾಲಿಕ ವಸತಿಗೃಹಕ್ಕೆ ಭೇಟಿ ಮಾಡಿ ಅಭಿನಂದಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮುರ್ಮು ಅವರ ವಿಜಯದ ನಂತರ ಪಕ್ಷದ ಪ್ರಧಾನ ಕಚೇರಿಯಿಂದ ರಾಜ್ಪಥ್ವರೆಗೆ ರೋಡ್ಶೋ ನಡೆಸಲು ದಿಲ್ಲಿ ಬಿಜೆಪಿ ಯೋಜಿಸಿದೆ. ಈ ಸಂದರ್ಭದಲ್ಲಿ ಹಲವು ಹಿರಿಯ ನಾಯಕರು ಉಪಸ್ಥಿತರಿರುವರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಎಲ್ಲಾ ರಾಜ್ಯ ಘಟಕಗಳು ಸಹ ವಿಜಯದ ಮೆರವಣಿಗಳನ್ನು ಯೋಜಿಸಿವೆ.
ಮುರ್ಮು ಅವರ ಹುಟ್ಟೂರಾದ ಒಡಿಶಾದ ರೈರಂಗಪುರದ ನಿವಾಸಿಗಳು ಕೂಡ 20,000 ಸಿಹಿತಿಂಡಿಗಳೊಂದಿಗೆ ಸಂಭ್ರಮ ಆಚರಿಸಲು ಸಿದ್ಧರಾಗಿದ್ದಾರೆ. ಬುಡಕಟ್ಟು ಜನಾಂಗದ ನೃತ್ಯ ಹಾಗೂ ವಿಜಯೋತ್ಸವದ ಮೆರವಣಿಗೆಯನ್ನು ಸಹ ಯೋಜಿಸಲಾಗಿದೆ.