ಸಂಚಾರಕ್ಕೆ ಹಡಗುಗಳ ಕೊರತೆ: ಲಕ್ಷದ್ವೀಪ ನಿವಾಸಿಗಳ ಪ್ರತಿಭಟನೆ; ಹಲವರನ್ನು ವಶಕ್ಕೆ ಪಡೆದ ಪೊಲೀಸರು
Photo: PIB/Wikimedia Commons, GODL-Indi
ಹೊಸದಿಲ್ಲಿ: ಲಕ್ಷದ್ವೀಪದಿಂದ ಭಾರತದ ಇತರ ಕರಾವಳಿ ಭಾಗಗಳಿಗೆ ಸಂಚರಿಸುವ ಹಡುಗಗಳ ಸಂಖ್ಯೆ ಇತ್ತೀಚೆಗೆ ತೀರಾ ವಿರಳವಾಗಿರುವುದರಿಂದ ದ್ವೀಪದ ಜನರು ಸಂಚಾರ ಸಮಸ್ಯೆ ಎದುರಿಸುವಂತಾಗಿದ್ದು, ದ್ವೀಪ ವಾಸಿಗಳ ಸಹನೆಯ ಕಟ್ಟೆಯೊಡೆದ ಪರಿಣಾಮ ಗುರುವಾರ ಅಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ.
ರಾಜಧಾನಿಯ ಕವರಟ್ಟಿಯ ಸೆಕ್ರಟೇರಿಯಟ್ ಎದುರು ದ್ವೀಪವಾಸಿಗಳು ಪ್ರತಿಭಟನೆ ನಡೆಸಿ ಲಕ್ಷದ್ವೀಪ ಹಾಗೂ ಕೇರಳದ ಕೊಚ್ಚಿ ನಡುವೆ ಹಡಗು ಸೇವೆಗೆ ಬೇಡಿಕೆಯಿಟ್ಟಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಈ ಬಂಧನಗಳು ವಿವಾದಕ್ಕೀಡಾದ ನಂತರ ಅಲ್ಲಿನ ಆಡಳಿತ ಸ್ಪಷ್ಟೀಕರಣ ನೀಡಿ, ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಪ್ರತಿಭಟನಾಕಾರರನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೇಳಿದೆ.
ಈ ನಡುವೆ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಪ್ರತಿಕ್ರಿಯಿಸಿ ಈ ಪ್ರತಿಭಟನೆಗಳನ್ನು ಕೆಲ ಸಂಘಟನೆಗಳು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿದ್ಧಾರೆ.
"ಪ್ರತಿಭಟನೆಗಳ ಹೆಸರಿನಲ್ಲಿ ನಡೆಯುತ್ತಿರುವುದು ರಾಜಕೀಯ ಸ್ಟಂಟ್. ಪೀಕ್ ಸಮಯದಲ್ಲಿ ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವಂತೆ ರಜಾ ಸಮಯವಾಗಿರುವುದರಿಂದ ಹಡಗು ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಸಂಚಾರಕ್ಕೆ ಬಳಸಲಾಗುತ್ತಿದ್ದ ಪ್ರಮುಖ ಹಡಗು ಬೆಂಕಿ ಅವಘಡಕ್ಕೀಡಾದ ನಂತರ ಅದನ್ನು ಶಿಪ್ಪಿಂಗ್ ಕಾರ್ಪೊರೇಷನ್ ದುರಸ್ತಿ ಪಡಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
ಇಲ್ಲಿನ ಮಕ್ಕಳು ಶಿಕ್ಷಣಕ್ಕಾಗಿ ಕೇರಳಕ್ಕಾಗಿ ಹೋಗುವುದನ್ನು ತಡೆಯಲು ತಮ್ಮ ಆಡಳಿತ ಶಾಲಾ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ನರ್ಸಿಂಗ್ ಸಂಸ್ಥೆಗಳನ್ನು ಆರಂಭಿಸಿದೆ ಎಂದು ಅವರು ಹೇಳಿಕೊಂಡರು.