ಧನ್ಬಾದ್ ನ್ಯಾಯಾಧೀಶರ ಹತ್ಯೆ ಪ್ರಕರಣ: ಇಬ್ಬರನ್ನು ದೋಷಿ ಎಂದ ಜಾರ್ಖಂಡ್ ನ್ಯಾಯಾಲಯ
ರಾಂಚಿ, ಜು. 28: ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದಲ್ಲಿ ಜಾರ್ಖಂಡ್ನ ಧನ್ಬಾದ್ ಜಿಲ್ಲಾ ನ್ಯಾಯಾಲಯ ಗುರುವಾರ ಇಬ್ಬರನ್ನು ದೋಷಿ ಎಂದು ಪರಿಗಣಿಸಿದೆ.
ನ್ಯಾಯಮೂರ್ತಿ ಉತ್ತಮ್ ಆನಂದ್ ಹತ್ಯೆಯಾದ ಸರಿಯಾಗಿ ಒಂದು ವರ್ಷದ ಬಳಿಕ ಈ ತೀರ್ಪು ಹೊರ ಬಿದ್ದಿದೆ.
ಪ್ರಕರಣದ ಲಖನ್ ಕುಮಾರ್ ವರ್ಮಾ ಹಾಗೂ ರಾಹುಲ್ ಕುಮಾರ್ ವರ್ಮಾ ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ದೋಷಿಗಳ ಶಿಕ್ಷೆಯ ಪ್ರಮಾಣದ ಕುರಿತ ವಾದವನ್ನು ನ್ಯಾಯಾಲಯ ಆಗಸ್ಟ್ 6ರಂದು ಆಲಿಸಲಿದೆ.
ಧನ್ಬಾದ್ನಲ್ಲಿ ತ್ರಿಚಕ್ರ ವಾಹನ ಢಿಕ್ಕಿ ಹೊಡೆದು ನ್ಯಾಯಮೂರ್ತಿ ಉತ್ತಮ್ ಆನಂದ್ ಅವರು ಕಳೆದ ವರ್ಷ ಜುಲೈ 28ರಂದು ಸಾವನ್ನಪ್ಪಿದ್ದರು. ನಿರ್ಜನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ 49ರ ಹರೆಯದ ಉತ್ತಮ್ ಆನಂದ್ ಅವರಿಗೆ ವೇಗವಾಗಿ ಬಂದ ತ್ರಿಚಕ್ರ ವಾಹನ ಢಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು.
ಸಾವನ್ನಪ್ಪುವುದಕ್ಕಿಂತ ಮುನ್ನ ಅವರು ಮಾಜಿ ಶಾಸಕ ಸಂಜೀವ್ ಸಿಂಗ್ ಅವರ ಆಪ್ತ ವಿಶ್ವಾಸಿ ರಂಜಯ್ ಸಿಂಗ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಸಾಯುವುದಕ್ಕಿಂತ ಕೇವಲ ಮೂರು ದಿನಕ್ಕಿಂತ ಮುನ್ನ ಅವರು ಉತ್ತರಪ್ರದೇಶದ ಶೂಟರ್ಗಳಾದ ಅಭಿನವ್ ಸಿಂಗ್ ಹಾಗೂ ಅಮನ್ ಸಿಂಗ್ ಅವರ ನಿಕಟವರ್ತಿ ರವಿ ಠಾಕೂರ್ಗೆ ಜಾಮೀನು ನಿರಾಕರಿಸಿದ್ದರು.