ಸ್ಮೃತಿ ಇರಾನಿ, ಅವರ ಪುತ್ರಿಗೆ ಗೋವಾದಲ್ಲಿ ರೆಸ್ಟೋರೆಂಟ್, ಬಾರ್ ಇಲ್ಲ: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಆ. 1: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿಗೆ ಗೋವಾದಲ್ಲಿ ಸ್ವಂತ ರೆಸ್ಟೋರೆಂಟ್ ಹಾಗೂ ಬಾರ್ ಇಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ಸ್ಮೃತಿ ಇರಾನಿ ಹಾಗೂ ಅವರ ಪುತ್ರಿ ವಿರುದ್ಧ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಹಾಗೂ ಇತರರು ಸುಳ್ಳು ಆರೋಪ ಹಾಗೂ ವೈಯುಕ್ತಿಕ ದಾಳಿ ನಡೆಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
‘‘ದಾಖಲೆಗಳನ್ನು ಪರಿಶೀಲಿಸಿದಾಗ ಸ್ಮತಿ ಇರಾನಿ ಅಥವಾ ಅವರು ಪುತ್ರಿಗೆ ಯಾವುದೇ ಪರವಾನಿಗೆ ನೀಡಿಲ್ಲ ಎಂಬುದು ಸ್ಪಷ್ಟವಾಗಿ ಕಂಡು ಬಂದಿದೆ. ಸ್ಮೃತಿ ಇರಾನಿ ಅಥವಾ ಅವರ ಪುತ್ರಿ ರೆಸ್ಟೋರೆಂಟ್ನ ಮಾಲಕರು ಅಲ್ಲ. ಅಲ್ಲದೆ, ಸ್ಮೃತಿ ಇರಾನಿ ಅಥವಾ ಅವರ ಪುತ್ರಿ ಪರವಾನಿಗೆಗೆ ಅರ್ಜಿ ಸಲ್ಲಿಸಿಲ್ಲ’’ ಎಂದು ನ್ಯಾಯಾಲಯ ಹೇಳಿದೆ. ಸ್ಮೃತಿ ಇರಾನಿ ಅವರು ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಸಿದ 2 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಕಾನೂನು ಬಾಹಿರವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.