ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವೇಳೆ ಬ್ಯಾರಿಕೇಡ್ ದಾಟಿದ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
Photo: Twitter
ಹೊಸದಿಲ್ಲಿ,ಆ.5: ನಿರುದ್ಯೋಗ,ಬೆಲೆಏರಿಕೆ ಮತ್ತು ಜಿಎಸ್ಟಿ ಹೆಚ್ಚಳದ ವಿರುದ್ಧ ಶುಕ್ರವಾರ ಬೆಳಿಗ್ಗೆ ಇಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಂಸದ ರಾಹುಲ್ ಗಾಂಧಿಯವರು ಚಾಲನೆ ನೀಡಿದ ಮತ್ತು ನರೇಂದ್ರ ಮೋದಿ ಸರಕಾರವನ್ನು ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ‘ಹೈಜಾಕ್ ಮಾಡಿರುವ ಸರ್ವಾಧಿಕಾರಿ ಆಡಳಿತಕ್ಕೆ ಹೋಲಿಸಿದ ಬೆನ್ನಿಗೇ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
ರಾಷ್ಟ್ರಪತಿ ಭವನಕ್ಕೆ ಜಾಥಾದಲ್ಲಿ ಹೊರಟಿದ್ದ ರಾಹುಲ್ ಮತ್ತು ಶಶಿ ತರೂರ್ ಸೇರಿದಂತೆ ಹಲವಾರು ಕಾಂಗ್ರೆಸ್ ಸಂಸದರನ್ನು ತಡೆದ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪ್ರತಿಭಟನೆಯ ಸಂಕೇತವಾಗಿ ಸಂಸದರು ಕಪ್ಪು ಉಡುಪು ಧರಿಸಿದ್ದರು.
ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರನ್ನೂ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಪ್ರತಿಭಟನೆಯ ಸಂಕೇತವಾಗಿ ಪಕ್ಷದ ಇತರ ನಾಯಕರಂತೆ ಕಪ್ಪು ಉಡುಪು ಧರಿಸಿದ್ದ ಪ್ರಿಯಾಂಕಾ ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಮುನ್ನ ಬ್ಯಾರಿಕೇಡ್ಗಳನ್ನು ಜಿಗಿದು ನಿಗದಿತ ಸ್ಥಳವನ್ನು ತಲುಪಿ ಕೆಲ ನಿಮಿಷಗಳ ಕಾಲ ಧರಣಿಯನ್ನು ನಡೆಸಿದ್ದರು. ಪ್ರಿಯಾಂಕಾ ಪ್ರತಿರೋಧಿಸಿದಾಗ ಮಹಿಳಾ ಪೊಲೀಸರು ಅವರನ್ನು ಎಳೆದೊಯ್ದು ವಾಹನದಲ್ಲಿ ತುಂಬಿಸಿದರು.
ವಿಜಯ ಚೌಕ್ ಬಳಿಯಿಂದ ಪೊಲೀಸ್ ಬಸ್ನಲ್ಲಿ ತುಂಬಿ ಸಾಗಿಸಲಾದ 64 ಸಂಸದರಲ್ಲಿ ರಾಹುಲ್ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ,ಅಧೀರ ರಂಜನ ಚೌಧರಿ ಮತ್ತು ಗೌರವ ಗೊಗೊಯಿ ಅವರೂ ಸೇರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿದವು.
ವಿಜಯ ಚೌಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್,‘ಬೆಲೆಏರಿಕೆಯ ವಿರುದ್ಧ ಧ್ವನಿಯೆತ್ತಲು ನಾವು ಇಲ್ಲಿದ್ದೇವೆ ’ ಎಂದರು. ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.
‘ಈ ಶಕ್ತಿಗಳನ್ನು ಪ್ರತಿರೋಧಿಸುವುದು,ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಿಸಲ್ಪಡುವಂತೆ ನೋಡಿಕೊಳ್ಳುವುದು ಮತ್ತು ಜನತೆಯ ಸಮಸ್ಯೆಗಳನ್ನು ಎತ್ತುವುದು ನಮ್ಮ ಕರ್ತವ್ಯವಾಗಿದೆ ಮತ್ತು ನಾವದನ್ನು ಮಾಡುತ್ತಿದ್ದೇವೆ’ ಎಂದು ಹೇಳಿದ ರಾಹುಲ,ಪಕ್ಷದ ಕೆಲವು ಸಂಸದರನ್ನು ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಸರ್ವಾಧಿಕಾರ ಸನ್ನಿಹಿತವಾಗುತ್ತಿದೆ ಮತ್ತು ಈಗ ಆರೆಸ್ಸೆಸ್ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ ಎಂದರು.
ರಾಹುಲ್ ಮತ್ತು ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸ್ ನಾಯಕರನು್ನ ಜಿಟಿಬಿ ನಗರದ ಕಿಂಗ್ಸ್ವೇ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಿರ್ಬಂಧದಲ್ಲಿರಿಸಿದ್ದ ಪೊಲೀಸರು ಸುಮಾರು ಆರು ಗಂಟೆಗಳ ಬಳಿಕ ಅವರನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರಪತಿ ಭವನಕ್ಕೆ ಜಾಥಾ ನಡೆಸಲು ಮತ್ತು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯೋಜಿಸಿದ್ದ ಕಾಂಗ್ರೆಸ್ ಸದಸ್ಯರು ಅದಕ್ಕೂ ಮುನ್ನ ಕಪ್ಪು ಉಡುಪುಗಳನ್ನು ಧರಿಸಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಂಸತ್ತಿಗೆ ತೆರಳಿದ್ದರು. ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ಸರಕಾರದಿಂದ ಜನರ ಸಮಸ್ಯೆಗಳ ಕಡೆಗಣನೆ ಆರೋಪಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯಿಂದಾಗಿ ಸಂಸತ್ ಕಲಾಪಗಳಿಗೆ ವ್ಯತ್ಯಯವುಂಟಾಗಿತ್ತು.
ಪಕ್ಷದ ಸಂಸದರು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಜಾಥಾ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿತ್ತು. ಸಿಡಬ್ಲುಸಿ ಸದಸ್ಯರು ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸಕ್ಕೆ ಮುತ್ತಿಗೆಯಲ್ಲಿ ಪಾಲ್ಗೊಳ್ಳಲಿದ್ದರು.
ಆದರೆ ಭದ್ರತಾ ಕಾರಣಗಳಿಂದ ಕಾಂಗ್ರೆಸ್ ಯೋಜನೆಗೆ ಅವಕಾಶ ನೀಡದಿರಲು ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಆಡಳಿತವು ದಿಲ್ಲಿಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಹೇರಿದ್ದು,ಪೊಲೀಸರು ಇದನ್ನು ಉಲ್ಲೇಖಿಸಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿದ್ದರು.
‘ನಾವಿಂದು ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ. ಸುಮಾರು ಒಂದು ಶತಮಾನದ ಹಿಂದಿನಿಂದ ಒಂದೊಂದಾಗಿ ಇಟ್ಟಿಗೆಗಳನ್ನು ಜೋಡಿಸಿ ಭಾರತವನ್ನು ನಿರ್ಮಿಸಲಾಗಿತ್ತು. ಅದನ್ನು ಇಂದು ನಿಮ್ಮ ಕಣ್ಣುಗಳ ಮುಂದೆಯೇ ನಾಶಗೊಳಿಸಲಾಗುತ್ತಿದೆ. ಸರ್ವಾಧಿಕಾರವನ್ನು ಹೇರುವ ಈ ಪರಿಕಲ್ಪನೆಯ ವಿರುದ್ಧ ನಿಂತವರ ಮೇಲೆ ಕ್ರೂರ ದಾಳಿ ನಡೆಸಲಾಗುತ್ತಿದೆ,ಜೈಲಿಗೆ ತಳ್ಳಲಾಗುತ್ತಿದೆ ಮತ್ತು ಥಳಿಸಲಾಗುತ್ತಿದೆ ’ ಎಂದು ರಾಹುಲ್ ಪ್ರತಿಭಟನೆಗೆ ಮುನ್ನ ಟ್ವೀಟಿಸಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಬಿಜೆಪಿ,ಕಾಂಗ್ರೆಸ್ನೊಳಗೆ ಪ್ರಜಾಪ್ರಭುತ್ವವಿದೆಯೇ ಎಂದು ಪ್ರಶ್ನಿಸಿದೆ. ಅದು ವಂಶಾಡಳಿತದ ಪಕ್ಷವಾಗಿದೆ ಎಂದು ಬಿಜೆಪಿ ಬಣ್ಣಿಸಿದೆ.
#WATCH Congress leader Priyanka Gandhi Vadra jumps over a police barricade placed near AICC during party protest against price rise & unemployment in Delhi
— ANI (@ANI) August 5, 2022
She was later detained by police during the Congress protest pic.twitter.com/s7lqYqsnEh