ದೋಷಪೂರಿತ ರಾಷ್ಟ್ರಧ್ವಜಗಳ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಬಿಎಂಸಿಗೆ ಶಿವಸೇನೆ ಎಚ್ಚರಿಕೆ
Photo: ANI
ಹೊಸದಿಲ್ಲಿ: ದೋಷಪೂರಿತ ಧ್ವಜಗಳನ್ನು ಪೂರೈಸಿದ ಆರೋಪದ ಮೇಲೆ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ರಾಷ್ಟ್ರಧ್ವಜಗಳನ್ನು ಪೂರೈಸುವ ತಯಾರಕರ ವಿರುದ್ಧ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಎಚ್ಚರಿಸಿದೆ.
ಮುಂಬೈನ ಮಾಜಿ ಮೇಯರ್ ಶಿವಸೇನೆಯ ಕಿಶೋರಿ ಪೆಡ್ನೇಕರ್ ಅವರು ಬುಧವಾರ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಅವರನ್ನು ಭೇಟಿ ಮಾಡಿ ತಯಾರಕರ ವಿರುದ್ಧ ಬಿಎಂಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಯಾರಕರು ನಗರ ಸಂಸ್ಥೆ ಬಿಎಂಸಿಗೆ ವಿತರಿಸಿದ 40 ಲಕ್ಷದಲ್ಲಿ ಸುಮಾರು 1.5 ಲಕ್ಷ ಧ್ವಜಗಳು ದೋಷಪೂರಿತವೆಂದು ಕಂಡುಬಂದಿದೆ ಹಾಗೂ ಬಿಎಂಸಿ ಬದಲಿಗಾಗಿ ಅದನ್ನು ಮಾರಾಟಗಾರರಿಗೆ ಹಿಂತಿರುಗಿಸಿದೆ.
“ನಾನು ಈಗಲೂ ನನ್ನ ನಗರದ ಜನರನ್ನು ಪ್ರತಿನಿಧಿಸುತ್ತೇನೆ ಹಾಗೂ ಅನೇಕ ಮುಂಬೈಕರ್ಗಳಿಂದ ಬಂದ ದೂರುಗಳ ನಂತರ ನಾನು ಆಯುಕ್ತರನ್ನು ಭೇಟಿ ಮಾಡಿದ್ದೇನೆ. ಈ ಧ್ವಜಗಳು ದೋಷಪೂರಿತವಾಗಿರುವುದರಿಂದ ಯಾರೂ ತಮ್ಮ ಮನೆಗಳ ಹೊರಗೆ ಬಳಸಲು ಬಯಸುವುದಿಲ್ಲ. ಇದು ಅತಿರೇಕದ ಮತ್ತು ಅಸಂವಿಧಾನಿಕ. ಒಂದೇ ಒಂದು ಧ್ವಜವು ಅಗತ್ಯವಿರುವ ನಿರ್ದಿಷ್ಟತೆಗೆ ಅನುಗುಣವಾಗಿಲ್ಲ’’ ಎಂದು ಪೆಡ್ನೇಕರ್ ಹೇಳಿದ್ದಾರೆ.