ಬಿಜೆಪಿ ನಮ್ಮನ್ನು ಕೈಬಿಟ್ಟಿದೆ: ಮಹಿಳೆ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತ ಶ್ರೀಕಾಂತ್ ತ್ಯಾಗಿ ಪತ್ನಿ ಆರೋಪ
ಅನು ತ್ಯಾಗಿ (Photo: Twitter/@ANI)
ನೋಯ್ಡಾ: ಶ್ರೀಕಾಂತ್ ತ್ಯಾಗಿ ಸದಾ ಬಿಜೆಪಿ(BJP) ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು; ಆದರೆ ಕಳೆದ ವಾರ ಮಹಿಳೆಯ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಬಿಜೆಪಿ ನಮ್ಮನ್ನು ಕೈಬಿಟ್ಟಿದೆ ಎಂದು ಬಂಧಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ(Shrikant Tyagi)ಯವರ ಪತ್ನಿ ಅನು ತ್ಯಾಗಿ ಹೇಳಿದ್ದಾರೆ.
ಕಳೆದ ಶುಕ್ರವಾರ ಎರಡು ಬಾರಿ ಅನು ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಮಾನಸಿಕವಾಗಿ ಪೊಲೀಸರು ಚಿತ್ರಹಿಂಸೆ ನೀಡಿದ್ದು, ಇಡೀ ಪ್ರಕರಣದಲ್ಲಿ ಕಿರುಕುಳ ನೀಡಲಾಗಿದೆ ಎಂದು ಆಪಾದಿಸಿದ್ದಾರೆ. ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನೋಯ್ಡಾ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.
ಬಿಜೆಪಿ ಜತೆಗಿನ ಸಂಬಂಧ ಬಗ್ಗೆ ಪ್ರಶ್ನಿಸಿದಾಗ, "ಬಿಜೆಪಿಯ ಎಲ್ಲ ಸಭೆ ಸಮಾರಂಭ ಹಾಗೂ ರ್ಯಾಲಿಗಳಲ್ಲಿ ಅವರು ಭಾಗವಹಿಸುತ್ತಿದ್ದುದನ್ನು ನೋಡಿದ್ದೇನೆ. ಈ ಕಾರ್ಯಕ್ರಮಗಳಲ್ಲಿ ಯಾವ ಹುದ್ದೆ ಇದೆ ಎಂಬ ಕಾರಣಕ್ಕಾಗಿ ಭಾಗವಹಿಸುತ್ತಿದ್ದಾರೆ ಎಂದು ಅಚ್ಚರಿಯಾಗುತ್ತಿತ್ತು. ಇದೀಗ ಅವರನ್ನು ಕೈಬಿಟ್ಟಿದ್ದಾರೆ. ಏಕೆ ಎನ್ನುವುದು ನನಗೆ ಗೊತ್ತಿಲ್ಲ" ಎಂದು ಸ್ಪಷ್ಟಪಡಿಸಿದರು. ನೋಯ್ಡಾದಿಂದ ಗಾಝಿಯಾಬಾದ್, ಮೋದಿ ನಗರವರೆಗೆ ಕೂಡಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ವಿವರಿಸಿದರು.
ಮಾರ್ಕೆಟ್ ಪ್ರದೇಶದಲ್ಲಿ ಅವರು ನಿಂತರೆ ಸಾಕು; ತಕ್ಷಣ ನೂರಾರು ಮಂದಿ ಮುತ್ತಿಕೊಳ್ಳುತ್ತಾರೆ. ಅಂಥ ಸಾಮಾಜಿಕ ಸಂಪರ್ಕ ಅವರದ್ದು ಎನ್ನುವುದು ಅವರ ಪ್ರತಿಪಾದನೆ. ಹೌಸಿಂಗ್ ಸೊಸೈಟಿಯಲ್ಲಿ ಗಿಡ ನೆಡುವ ಸಂಬಂಧ ಮಹಿಳೆಯ ಜತೆಗೆ ಉಂಟಾದ ವಿವಾದದ ಬಳಿಕ ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿದ್ದ ತ್ಯಾಗಿಯನ್ನು ಮಂಗಳವಾರ ಮೀರತ್ ನಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣದ ಬಳಿಕ ನಟಿಯ ಬೇಡಿಕೆ ಹೆಚ್ಚಿದೆ ಎಂದ ಕೇರಳ ಮಾಜಿ ಶಾಸಕ!