ಭಾಷಣದಲ್ಲಿ 'ನಾರಿ ಶಕ್ತಿ' ಬಗ್ಗೆ ಹೇಳಿದ ಪ್ರಧಾನಿ ಮೋದಿಗೆ ಮಹಿಳಾ ಹೋರಾಟಗಾರ್ತಿಯರ ಹಲವು ಪ್ರಶ್ನೆಗಳು
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಇಂದು 75ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ(Independence Day speech) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 'ನಾರಿ ಶಕ್ತಿ'(nari shakti) ಯನ್ನು ಹಾಡಿ ಹೊಗಳಿದ್ದಾರೆ. ಆದರೆ ಅವರ ಸರಕಾರ ವಾಸ್ತವವಾಗಿ ಮಹಿಳಾ ಸಬಲೀಕರಣ ಯೋಜನೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂಬ ಪ್ರಶ್ನೆಯನ್ನು ಮಹಿಳಾ ಹಕ್ಕುಗಳ ಹೋರಾಟಗಾರರು ಅವರ ಮುಂದಿಟ್ಟಿದ್ದಾರೆ.
ಮಹಿಳೆಯರ ಘನತೆಯನ್ನು ಕುಂದಿಸುವ ಹಾಗೂ ಮಹಿಳೆಯರನ್ನು ತಮ್ಮ ಮಾತುಗಳು ಅಥವಾ ವರ್ತನೆಯಿಂದ ಅವಮಾನಿಸುವುದಿಲ್ಲವೆಂದು ಎಲ್ಲರೂ ಪ್ರತಿಜ್ಞೆಗೈಯ್ಯಬೇಕು ಎಂದು ಇಂದಿನ ತಮ್ಮ ಭಾಷಣದಲ್ಲಿ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅಕಂಚಾ ಶ್ರೀವಾಸ್ತವ ಫೌಂಡೇಶನ್ ಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅಕಂಚ ಶ್ರೀವಾಶ್ತವ, ನಿರ್ಭಯಾ ನಿಧಿ ಬಳಸಿ ಯಾವ ಮಹಿಳಾ ಸುರಕ್ಷಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಶ್ನಿಸಿದರಲ್ಲದೆ, ಸರಕಾರ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ತಂದ ನೀತಿ ಬದಲಾವಣೆಗಳ್ಯಾವುವು ಎಂದು ಕೇಳಿದ್ದಾರೆ. "ಹಲವು ಕಡೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಇರುವುದನ್ನು ವಿವರಿಸಿದ ಅವರು ಸುರಕ್ಷಾ ಮತ್ತು ಶಿಕ್ಷಾ ಇರದ ಹೊರತು ಶಕ್ತಿ ಇರಲು ಸಾಧ್ಯವಿಲ್ಲ ಎಂದರು. "ನೀತಿಗಳಿವೆ, ಅನುದಾನವಿದೆ ಹಾಗೂ ಉದ್ದೇಶವೂ ಇದೆ ಆದರೆ ಕಾರ್ಯಗತವಾಗುವುದನ್ನು ನೋಡಬೇಕಿದೆ,'' ಎಂದು ಅವರು ಹೇಳಿದರು.
ಪ್ರಧಾನಿ ಭಾಷಣ ಕುರಿತು ಪ್ರತಿಕ್ರಿಯಿಸಿದ ಆಲ್ ಇಂಡಿಯಾ ಪ್ರೊಗ್ರೆಸ್ಸಿವ್ ವಿಮೆನ್ಸ್ ಅಸೋಸಿಯೇಶನ್ ಸದಸ್ಯೆ ಕವಿತಾ ಕೃಷ್ಣನ್, "ಮಹಿಳೆಯರ ಕುರಿತು ಸಮಾಜದ ದೃಷ್ಟಿಕೋನ ಬದಲಾಗಬೇಕು ಎಂದು ಜನಪ್ರತಿನಿಧಿಯೊಬ್ಬರು ಹೇಳುವಾಗ ಅದಕ್ಕೆ ಯಾವಾಗಲೂ ಸ್ವಾಗತವಿದೆ ಆದರೆ ಈ ರೀತಿಯ ಸಲಹೆ (ಉಪದೇಶ) ಬರೀ ಸಾಮಾನ್ಯ ಹಾಗೂ ನಿರ್ದಿಷ್ಟತೆಯಿಂದ ಕೂಡಿಲ್ಲ. ಮುಸ್ಲಿಂ ಮಹಿಳೆಯರನ್ನು ಆನ್ಲೈನ್ನಲ್ಲಿ ಹರಾಜು ಹಾಕುವ ಮೋದಿಯ ಬೆಂಬಲಿಗರು, ಮುಸ್ಲಿಂ ಮಹಿಳೆಯರ ಅತ್ಯಾಚಾರಕ್ಕೆ ಕರೆ ನೀಡಿದ ಹಿಂದುತ್ವ ನಾಯಕ ಯತಿ ನರಸಿಂಗಾನಂದ ಹಾಗೂ ಟ್ವಿಟ್ಟರ್ ನಲ್ಲಿ ಮೋದಿ ಅವರೇ ಫಾಲೋ ಮಾಡುವ ಹಾಗೂ ಮಹಿಳೆಯರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುವವರ ಬಗ್ಗೆ ಇಲ್ಲಿ ಮೌನವಿದೆ,'' ಎಂದು ಕವಿತಾ ಕೃಷ್ಣನ್ ಹೇಳಿದ್ದಾರೆ.
ಇನ್ನೋರ್ವ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯನ ಮಾತನಾಡಿ 'ಬೇಟಿ ಬಚಾವೋ ಬೇಟಿ ಪಡಾವೋ ಬಗ್ಗೆ ಕೂಡ ಕೆಂಪು ಕೋಟೆಯಲ್ಲಿಯೇ ಹೇಳಲಾಗಿತ್ತು ಆದರೆ ಪ್ರತಿನಿತ್ಯವೆಂಬತಂತೆ ಮಹಿಳೆಯರ ವಿರುದ್ಧದ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕೇಳುತ್ತೇವೆ. ಸಂದೇಶ ಮುಖ್ಯ ಆದರೆ ಅದರ ಜಾರಿ ಅಷ್ಟೇ ಮುಖ್ಯ,'' ಎಂದು ಅವರು ಹೇಳಿದರು.
ಇದನ್ನೂ ಓದಿ: ಜಾಹೀರಾತಿನಲ್ಲಿ ನೆಹರೂ ಫೋಟೋ ಹಾಕಬೇಕಾಗಿತ್ತು ಎಂದ ಸಚಿವ ಬಿ.ಸಿ. ಪಾಟೀಲ್