ಜಮ್ಮು–ಕಾಶ್ಮೀರ: ನದಿಗೆ ಉರುಳಿ ಬಿದ್ದ 37 ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್, ಆರು ಸೈನಿಕರು ಮೃತ್ಯು
Photo:NDTV
ಶ್ರೀನಗರ,ಆ.16: ಜಮ್ಮುಕಾಶ್ಮೀರದ ಪಹಲ್ಗಾಮ್ ಸಮೀಪ ಬಸ್ಸೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಐಟಿಬಿಪಿ ಯೋಧರು ಮೃತಪಟ್ಟಿದ್ದಾರೆ ಹಾಗೂ ಇತರ 30 ಮಂದಿ ಗಾಯಗೊಂಡಿದ್ದಾರೆ.
ಬಸ್ನಲ್ಲಿದ್ದ ಐಟಿಬಿಪಿ ಯೋಧರು ಅಮರನಾಥ ಯಾತ್ರೆಯ ಭದ್ರತೆ ಕಾರ್ಯಗಳಿಗೆ ನಿಯೋಜಿತರಾದವರಾಗಿದ್ದು, ಅವರು ತಮ್ಮ ಕರ್ತವ್ಯ ಮುಗಿಸಿ ವಾಪಾಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ದುರಂತಕ್ಕೀಡಾದ ಪೊಲೀಸ್ ಬಸ್ನಲ್ಲಿ 37 ಐಟಿಬಿಪಿ ಯೋಧರು ಹಾಗೂ ಇಬ್ಬರು ಪೊಲೀಸರು ಪ್ರಯಾಣಿಸುತ್ತಿದ್ದರೆಂದುತಿಳಿದುಬಂದಿದೆ. ಚಂದನ್ವಾರಿ ಹಾಗೂ ಪಹಲ್ಗಾಮ್ ಮಧ್ಯೆ ಇರುವ ಕಣಿವೆಗೆ ಬಸ್ ಉರುಳಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಆರು ಮಂದಿ ಐಟಿಬಿಪಿ ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಇತರ ಹತ್ತು ಮಂದಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಬಸ್ ಚಂದ್ವಾರಿಯಿಂದ ಶ್ರೀನಗರಲ್ಲಿರುವ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ತೆರಳುತ್ತಿತ್ತು ಎಂದು ಮೂಲಗಳು ತಿಳಿಸಿವೆ.