ದಲಿತ ಬಾಲಕನನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿದ ಶಿಕ್ಷಕನ ಬಂಧನ
ಲಕ್ನೋ: ಆರನೇ ತರಗತಿಯ ದಲಿತ ಬಾಲಕನೊಬ್ಬನನ್ನು ಶಾಲೆಯ ಶೌಚಾಲಯದಲ್ಲಿ 18 ಗಂಟೆಗಳ ಕಾಲ ಸರಕಾರಿ ಶಾಲಾ ಶಿಕ್ಷಕರೊಬ್ಬರು ದಿಗ್ಬಂಧನದಲ್ಲಿರಿಸಿದ ಘಟನೆ ಉತ್ತರ ಪ್ರದೇಶದ ಔರಯ್ಯಾ ಜಿಲ್ಲೆಯ ಬಿಧುನಾ ತೆಹ್ಸಿಲ್ ಪ್ರದೇಶದಿಂದ ವರದಿಯಾಗಿದೆ. ಘಟನೆ ಆಗಸ್ಟ್ 5ರಂದು ನಡೆದಿದೆ ಎನ್ನಲಾಗಿದೆಯಾದರೂ ಅದಕ್ಕೆ ಸಂಬಂದಿಸಿದ ವೀಡಿಯೋ ಇತ್ತೀಚೆಗೆ ವೈರಲ್ ಆದ ನಂತರವಷ್ಟೇ ಹೊರಜಗತ್ತಿಗೆ ತಿಳಿದು ಬಂದಿತ್ತು.
ರವಿವಾರ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕ, 11 ವರ್ಷದ ಪೂರ್ವ ದುಜೆ ಎಂಬಾತ ಎಂದಿನಂತೆ ಪಿಪ್ರೌಲಿ ಶಿವ್ ಗ್ರಾಮದ ಶಾಲೆಗೆ ಆಗಸ್ಟ್ 5ರಂದು ತೆರಳಿದ್ದರೂ ಆತ ತಡ ಸಂಜೆವರೆಗೂ ಮನೆಗೆ ಹಿಂತಿರುಗದೇ ಇದ್ದಾಗ ಆತಂಕಕ್ಕೀಡಾದ ಕುಟುಂಬ ಸದಸ್ಯರು ಆತನಿಗಾಗಿ ಹುಡುಕಲಾರಂಭಿಸಿದ್ದರು.
ಮರುದಿನ ಶಾಲೆ ಆರಂಭಗೊಂಡಾಗ ಹಾಗೂ ಶಿಕ್ಷಕ ಶೌಚಾಲಯದ ಬಾಗಿಲು ತೆರೆದಾಗ ಅದರೊಳಗೆ ಪೂರ್ವ ಪತ್ತೆಯಾಗಿದ್ದ. ಮನೆಗೆ ತೆರಳಿದ ಪೂರ್ವ ನಡೆದ ಘಟನೆಯನ್ನು ಹೆತ್ತವರಿಗೆ ವಿವರಿಸಿದ್ದಾನೆ. ತಾನು ಆಗಸ್ಟ್ 5ರಂದು ಮನೆಗೆ ತೆರಳಬೇಕೆನ್ನುವಷ್ಟರಲ್ಲಿ ಶಿಕ್ಷಕ ವಿಜಯ್ ಕುಶ್ವಾಹ ತನ್ನನ್ನು ತಡೆದು ಸುಮಾರು 2 ಗಂಟೆ ವೇಳೆಗ ಶೌಚಾಲಯದೊಳಗೆ ಕೂಡಿ ಹಾಕಿ ಹೊರಗಿನಿಂದ ಚಿಲಕ ಹಾಕಿದ್ದರು. ರಾತ್ರಿಯಿಡೀ ಕಿರುಚಾಡಿದ್ದೆ ಎಂದು ಆತ ಹೇಳಿದ್ದಾನೆ.
ಶಾಲೆಯ ಸುತ್ತಮುತ್ತ ಯಾವುದೇ ಮನೆಗಳಿಲ್ಲದೇ ಇದ್ದುದರಿಂದ ಯಾರಿಗೂ ಆತನ ಕಿರುಚಾಟ ಕೇಳಿರಲಿಲ್ಲ.
ಆದರೆ ಶಿಕ್ಷಕನಿಗೆ ವಿದ್ಯಾರ್ಥಿ ಶೌಚಾಲಯದೊಳಗೆ ಇದ್ದಾನೆಂದು ತಿಳಿದಿರದೇ ಇದ್ದ ಕಾರಣ ಹೊರಗಿನಿಂದ ಚಿಲಕ ಹಾಕಿದ್ದರೆಂದು ಹೇಳಲಾಗಿದೆ. ಈ ಘಟನೆಯ ಬಗ್ಗೆ ಇತರರ ಜೊತೆಗೆ ಬಾಯ್ಬಿಡದಂತೆ ಶಿಕ್ಷಕ ವಿದ್ಯಾರ್ಥಿಗೆ ಹಣವನ್ನೂ ನೀಡಿದ್ದನೆಂದು ಹೇಳಲಾಗಿದೆ.
ಘಟನೆಯ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.