ದೋಷಿಗಳ ಬಿಡುಗಡೆಗೆ ಕಾಂಗ್ರೆಸ್ ತೀವ್ರ ಖಂಡನೆ: ʼಅಮೃತ ಮಹೋತ್ಸವ ಎಂದರೆ ಇದೇನಾ?ʼ: ಖೇರಾ ಪ್ರಶ್ನೆ
ಹೊಸದಿಲ್ಲಿ, ಆ.16: 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ಬಾನೊ ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿಯನ್ನು ಗುಜರಾತ್ ಸರಕಾರ ಬಿಡುಗಡೆಗೊಳಿಸಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ ಹಾಗೂ ‘ರಾಜಧರ್ಮ ’ದ ಬಗ್ಗೆ ಪ್ರಧಾನಿಯವರಿಗೆ ನೆನಪಿಸಿದೆ. ಅಮೃತ ಮಹೋತ್ಸವ ಅಂದರೆ ಇದೇನಾ ಎಂದು ಅದು ಖಾರವಾಗಿ ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡಿದ ಕೆಲವೇ ತಾಸುಗಳ ಮೊದಲು, ಈ ಕೈದಿಗಳನ್ನು ಬಿಡುಗಡೆಗೊಳಿಸಿ ಗುಜರಾತ್ ಸರಕಾರ ಆದೇಶ ಹೊರಡಿಸಿರುವುದನ್ನು ಅದು ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ತಾನೇನು ಹೇಳುತ್ತಿದ್ದೇನೆ ಎಂಬುದರ ಅರಿವಿದೆಯೇ ಎಂದು ಅದು ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕ ಪವನ್ಖೇರಾ ಅವರು ಮಂಗಳವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ‘‘ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಜೈಲಿನಲ್ಲಿ 15 ವರ್ಷಗಳನ್ನು ಕಳೆದಿದ್ದಾರೆ, ಅವರ ನಡತೆ ಉತ್ತಮವಾಗಿತ್ತು ಮತ್ತು ಅಪರಾಧದ ಸ್ವರೂಪ ಹೀಗೆ ಈ ಕಾರಣಗಳನ್ನು ನೀಡಿ ಅವರನ್ನು ಬಿಡುಗಡೆಗೊಳಿಸಿದ್ದೀರಿ. ಆದರೆ ಒಂದು ವೇಳೆ ಅಪರಾಧದ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ, ಅತ್ಯಾಚಾರವು ಅತ್ಯಂತ ಕಠಿಣವಾದ ಶಿಕ್ಷೆಯನ್ನು ನೀಡಲಾಗುವ ಅಪರಾಧಗಳ ಸಾಲಿಗೆ ಸೇರುವುದಿಲ್ಲವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಡುಗಡೆಯಾದವರು ಸನ್ಮಾನಿಸಲ್ಪಡುತ್ತಿರುವುದು ಹಾಗೂ ಗೌರವಿಸಲ್ಪಡುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಅಮೃತ ಮಹೋತ್ಸವ ಎಂದರೆ ಇದೇನಾ ಎಂದು ಖೇರಾ ಅವರು ಕಟುವಾಗಿ ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು 2002ರ ಗಲಭೆಯ ಬಳಿಕ ಗುಜರಾತ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ರಾಜಧರ್ಮದ ಬಗ್ಗೆ ಮಾತನಾಡಿರುವದ್ನು ಅವರ ಜನ್ಮದಿನವಾದ ಮಂಗಳವಾರ ಪ್ರಧಾನಿಯವರಿಗೆ ತಾನು ನೆನಪಿಸಲಿಚ್ಚಿಸುತ್ತೇನೆ ಎಂದು ಖೇರಾ ಹೇಳಿದರು.
ಕೆಂಪುಕೋಟೆಯಲ್ಲಿ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ತಾನು ಮಾಡಿದ ಭಾಷಣವು ಕೇವಲ ಪದಗಳಷ್ಟೇ ಅದಕ್ಕೆ ಯಾವುದೇ ಅರ್ಥಗಳಿಲ್ಲವೇ ಎಂಬ ಬಗ್ಗೆ ಮೋದಿಯವರು ಸ್ಪಷ್ಟೀಕರಣ ನೀಡಬೇಕೆಂದು ಖೇರಾ ತಿಳಿಸಿದರು.
ಬಿಲ್ಕಿಸ್ ಬಾನು ಅವರಿಗೆ 50 ಲಕ್ಷ ರೂ. ಪರಿಹಾ ದೊರೆಯುವಂತೆ ಮಾಡಲು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿಬೇಕಾಗಿ ಬಂದಿತು., ಆಕೆಗೆ ಅನ್ಯಾಯವಾಗಿದೆ ಹಾಗೂ ಆಕೆಯ ಕುಟುಂಬವು ಯಾತನೆಯನ್ನು ಅನುಭವಿಸಬೇಕಾಗಿ ಬಂದಿದೆ ಎಂದು ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ತಿಳಿಸಿತ್ತು. ‘‘ಹೀಗಿದ್ದೂ ಕೆಂಪುಕೋಟೆಯ ಕೊತ್ತಲದಿಂದ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲು ನರೇಂದ್ರ ಮೋದಿಯವರಿಗೆ ಧೈರ್ಯ ಹೇಗೆ ಬಂತು? ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ಹಾಗೂ ಪ್ರಚಾರ ಇಲಾಖೆಯ ಅಧ್ಯಕ್ಷರೂ ಆಗಿರುವ ಖೇರಾ ಪ್ರಶ್ನಿಸಿದ್ದಾರೆ.