ರಾಜಸ್ಥಾನ: ಗುಂಪಿನಿಂದ ಥಳಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ತರಕಾರಿ ಮಾರಾಟಗಾರ ಸಾವು
ಆಲ್ವಾರ್, ಆ. 16: ರಾಜಸ್ಥಾನದ ಆಲ್ವಾರ್ನಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತರಕಾರಿ ಮಾರಾಟಗಾರ ಸೋಮವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ತರಕಾರಿ ಮಾರಾಟಗಾರರನ್ನು 45ರ ಹರೆಯದ ಚಿರಂಜಿ ಸೈನಿ ಎಂದು ಗುರುತಿಸಲಾಗಿದೆ. ಗೋವಿಂದಗಢ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಸೈನಿ ಅವರನ್ನು ಕಳ್ಳನೆಂದು ಶಂಕಿಸಿ 12 ಜನರಿದ್ದ ಗುಂಪೊಂದು ಥಳಿಸಿತ್ತು. ಸೈನಿ ಅವರು ಹೊಲದಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸೈನಿ ಅವರು ಜೀವನ ಸಾಗಿಸಲು ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು.
ಸೈನಿ ಅವರ ಸಾವಿನ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿರುವ ಜನರು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಸೈನಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಸೈನಿ ಅವರ ಪುತ್ರ ಯೋಗೀಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story