ಭಾರತ-ಚೀನಾ ಸಂಬಂಧಗಳು ಅತ್ಯಂತ ಕಠಿಣ ಹಂತದ ಮೂಲಕ ಸಾಗುತ್ತಿವೆ: ಎಸ್.ಜೈಶಂಕರ್
ಹೊಸದಿಲ್ಲಿ,ಆ.19: ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಚೀನಾದ ಏಕಪಕ್ಷೀಯ ಪ್ರಯತ್ನಗಳ ನಂತರ ಆ ದೇಶದೊಂದಿಗಿನ ಭಾರತದ ಸಂಬಂಧವು ಅತ್ಯಂತ ಕಠಿಣ ಹಂತದ ಮೂಲಕ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಗುರುವಾರ ಥೈಲಂಡ್ ರಾಜಧಾನಿ ಬ್ಯಾಂಕಾಂಕ್ನ ಚುಲಾಲಂಗಕರ್ನ್ ವಿವಿಯಲ್ಲಿ ‘ಇಂಡಿಯಾಸ್ ವಿಷನ್ ಆಫ್ ಇಂಡೋ-ಪೆಸಿಫಿಕ್ ’ ಉಪನ್ಯಾಸದ ವೇಳೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಜೈಶಂಕರ, ಚೀನಾ ಮತ್ತು ಭಾರತ ಒಟ್ಟಿಗೆ ಸೇರಿದಾಗ ಮಾತ್ರ ವಿಶ್ವವು ಏಶ್ಯನ್ ಶತಮಾನವನ್ನು ನೋಡಲಿದೆ ಎಂದರು. ಏಶ್ಯನ್ ಶತಮಾನವು 21ನೇ ಶತಮಾನದಲ್ಲಿ ಏಶ್ಯಾ ನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿರುವ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ.
ಭಾರತ ಮತ್ತು ಚೀನಾ ಒಟ್ಟಿಗೆ ಸೇರಬೇಕಿದ್ದರೆ ಅದಕ್ಕಾಗಿ ಹಲವಾರು ಕಾರಣಗಳಿವೆ, ಶ್ರೀಲಂಕಾ ಒಂದೇ ಕಾರಣವಾಗಿರುವ ಅಗತ್ಯವಿಲ್ಲ ಎಂದು ತಾನು ಭಾವಿಸಿದ್ದೇನೆ ಎಂದು ಜೈಶಂಕರ್ ಹೇಳಿದರು. 1948ರಿಂದಲೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ಮತ್ತು ಚೀನಾ ಇವೆರಡೂ ಹಣಕಾಸು ನೆರವನ್ನು ಒದಗಿಸಿವೆ.
ದ್ವೀಪರಾಷ್ಟ್ರಕ್ಕೆ ನೆರವಾಗಲು ಭಾರತವು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದೆ ಎಂದ ಅವರು,’ಅಂತರರಾಷ್ಟ್ರೀಯ ಹಣಕಾಸು ನಿಧಿ (ಎಎಂಎಫ್)ಯಲ್ಲಿ ಶ್ರೀಲಂಕಾಕ್ಕೆ ನಾವು ನೀಡಬಹುದಾದ ಯಾವುದೇ ನೆರವನ್ನು ನಾವು ಸಹಜವಾಗಿಯೇ ಮಾಡುತ್ತೇವೆ ’ಎಂದು ಹೇಳಿದರು.
ಭಾರತವು ರಶ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಕುರಿತು ಟೀಕೆಗಳನ್ನು ತಳ್ಳಿಹಾಕಿದ ಅವರು,‘ನಾವು ಹಾಗೆ ಮಾಡುತ್ತಿರುವ ಏಕಮಾತ್ರ ದೇಶವಲ್ಲ,ತೈಲದ ಮೇಲೆ ಯಾವುದೇ ನಿರ್ಬಂಧವನ್ನು ವಿಧಿಸಲಾಗಿಲ್ಲ’ ಎಂದು ಹೇಳಿದರು.
ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಕುರಿತು ಅತ್ಯಂತ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ ಇತರ ದೇಶಗಳು ಮತ್ತು ಪ್ರದೇಶಗಳಿವೆ,ಆದರೆ ಅವು ತಮ್ಮ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸಿವೆ ಎಂದು ಹೇಳಿದ ಜೈಶಂಕರ್,‘ನಮ್ಮ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸಲು,ವಿಶೇಷವಾಗಿ ನಾವು ಕಡಿಮೆ ಆದಾಯದ ದೇಶವಾಗಿರುವುದರಿಂದ,ನಮಗೂ ಅವಕಾಶ ನೀಡುವುದು ಸಮಂಜಸವಾಗಿದೆ ಎಂದು ನಾನು ಭಾವಿಸಿದ್ದೇನೆ. ಇಂಧನ ಬೆಲೆಗಳಲ್ಲಿ ಏರಿಕೆಯು ನಿಜಕ್ಕೂ ನಮಗೆ ನೋವನ್ನುಂಟು ಮಾಡುತ್ತದೆ ’ಎಂದು ಹೇಳಿದರು.
ಭಾರತವು ರಶ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದನ್ನು ಬುಧವಾರ ಟೀಕಿಸಿದ್ದ ಉಕ್ರೇನ್,ಭಾರತ ಸರಕಾರದಿಂದ ಹೆಚ್ಚು ಪ್ರಾಯೋಗಿಕ ಬೆಂಬಲವನ್ನು ತಾನು ನಿರೀಕ್ಷಿಸಿದ್ದೇನೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ.