ಸಮವಸ್ತ್ರ ಧರಿಸಿಲ್ಲವೆಂದು ದಲಿತ ವಿದ್ಯಾರ್ಥಿನಿಗೆ ಹಲ್ಲೆ ನಡೆಸಿ ಶಾಲೆಯಿಂದ ಹೊರದಬ್ಬಿದ ಗ್ರಾಮದ ಮಾಜಿ ಅಧ್ಯಕ್ಷ
ಸಾಂದರ್ಭಿಕ ಚಿತ್ರ
ಭಾದೋಹಿ (ಉ.ಪ್ರ.), ಆ. 23: ಸಮವಸ್ತ್ರ ಧರಿಸಿಲ್ಲವೆಂದು ದಲಿತ ವಿದ್ಯಾರ್ಥಿನಿಯೋರ್ವಳನ್ನು ಗ್ರಾಮದ ಮಾಜಿ ಅಧ್ಯಕ್ಷ ಜಾತಿ ನಿಂದನೆಗೈದು, ಥಳಿಸಿ ಶಾಲೆಯಿಂದ ಹೊರ ದಬ್ಬಿದ ಘಟನೆ ಉತ್ತರಪ್ರದೇಶದ ಭಾದೋಹಿಯಲ್ಲಿ ನಡೆದಿದೆ.
ಆರೋಪಿಯನ್ನು ಗ್ರಾಮದ ಮಾಜಿ ಮುಖ್ಯಸ್ಥ ಮನೋಜ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಧಿಕಾರಿಯೂ ಅಲ್ಲ, ಅಧ್ಯಾಪಕನೂ ಅಲ್ಲ. ಆದರೂ ಆತ ಪ್ರತಿ ದಿನ ಶಾಲೆಗೆ ತೆರಳುತ್ತಿದ್ದ. ಅಧ್ಯಾಪಕರು ಹಾಗೂ ಮಕ್ಕಳೊಂದಿಗೆ ದುರ್ವರ್ತನೆ ತೋರುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ಮನೋಜ್ ಕುಮಾರ್ ದುಬೆ ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಲ್ಲಿ ಸಮವಸ್ತ್ರ ಧರಿಸದಿರುವ ಬಗ್ಗೆ ಪ್ರಶ್ನಿಸಿದ್ದ ಎಂದು ಚೌರಿ ಪೊಲೀಸ್ ಠಾಣೆಯ ಉಸ್ತುವಾರಿ ಗಿರಿಜಾ ಶಂಕರ್ ಯಾದವ್ ಅವರು ಹೇಳಿದ್ದಾರೆ.
ತನ್ನ ತಂದೆ ಸಮವಸ್ತ್ರ ಖರೀದಿಸಿ ತಂದ ಬಳಿಕ ಧರಿಸುವೆ ಎಂದು ಬಾಲಕಿ ದುಬೆಗೆ ಪ್ರತಿಕ್ರಿಯೆ ನೀಡಿದ್ದಾಳೆ. ಇದನ್ನು ಕೇಳಿ ದುಬೆ ಬಾಲಕಿಗೆ ತರಗತಿಯಲ್ಲಿ ಥಳಿಸಿದ್ದಾನೆ. ಜಾತಿ ನಿಂದನೆ ಮಾಡಿದ್ದಾನೆ. ಅಲ್ಲದೆ, ಆಕೆಯನ್ನು ಶಾಲೆಯಿಂದ ಹೊರದಬ್ಬಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಬಾಲಕಿಯ ತಾಯಿದ ದೂರಿನ ಆಧಾರದಲ್ಲಿ ದುಬೆ ವಿರುದ್ಧ ಹಲ್ಲೆ, ಬೆದರಿಕೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗಿರಿಜಾ ಶಂಕರ್ ಯಾದವ್ ಅವರು ತಿಳಿಸಿದ್ದಾರೆ.