ಪತ್ರಕರ್ತ ಸಿದ್ದೀಕ್ ಕಪ್ಪನ್ ಜಾಮೀನು ಅರ್ಜಿಯ ಪರಿಶೀಲನೆಗೆ ಸುಪ್ರೀಂ ಸಮ್ಮತಿ
ಸಿದ್ದಿಕ್ ಕಪ್ಪನ್
ಹೊಸದಿಲ್ಲಿ,ಆ.24: ಹತ್ರಾಸ್ನಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ಮಾಡಲು ಉತ್ತರಪ್ರದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್, ಜಾಮೀನು ಬಿಡುಗಡೆ ಕೋರಿ ಸಲ್ಲಿಸಿದ ಅರ್ಜಿಯ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ಸಮ್ಮತಿಸಿದೆ.
ತನಗೆ ಜಾಮೀನು ಬಿಡುಗಡೆಯನ್ನು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್ನ ಆಗಸ್ಟ್ 2, 2022ರ ಆದೇಶವನ್ನು ಕಪ್ಪನ್ ಅವರು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು ಅರ್ಜಿಯ ಪರಿಶೀಲನೆ ನಡೆಸಲು ಸಮ್ಮತಿಸಿದೆ.
2020ರ ಸೆಪ್ಟೆಂಬರ್ 14ರಂದು ದಲಿತ ಸಮುದಾಯದ ಮಹಿಳೆಯೊಬ್ಬರನ್ನು, ಠಾಕೂರ್ ಸಮುದಾಯದ ನಾಲ್ವರು ಅತ್ಯಾಚಾರಗೈದು, ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಪ್ರಕರಣದ ವರದಿಯನ್ನು ಮಾಡಲು ಹೋದ ಕಪ್ಪನ್ ,ಅಲಮ್ ಹಾಗೂ ಇತರ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಹತ್ರಾಸ್ನಲ್ಲಿ ಶಾಂತಿ ಕದಡಿಸಲು ಅವರು ತೆರಳಿದ್ದರು ಹಾಗೂ ತಪ್ಪು ಮಾಹಿತಿ ನೀಡುವ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ವೆಬ್ಸೈಟ್ ನಡೆಸುವುದಕ್ಕಾಗಿ ಈ ನಾಲ್ವರು ಹಣಸಂಗ್ರಹಿಸುತ್ತಿದ್ದಾರೆಂದು ಪೊಲೀಸರು ಆಪಾದಿಸಿದ್ದರು.
ಯಾವುದೇ ಸೂಕ್ತ ಕಾರಣವನ್ನು ನೀಡದೆ ಅಲಹಾಬಾದ್ ಹೈಕೋರ್ಟ್ ಯಾಂತ್ರಿಕವಾದ ರೀತಿಯಲ್ಲಿ ಜಾಮೀನು ಅರ್ಜಿಯನ್ನು ರದ್ದುಪಡಿಸಿತ್ತು ಎಂದು ಕಪ್ಪನ್ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.