ಬಿಹಾರ: ಗೊಬ್ಬರ ಬೆಲೆ ಏರಿಕೆ ಮಾಡಿ ಮಾರಾಟ; ಸರಕಾರಿ ಅಧಿಕಾರಿಯನ್ನು ಕಂಬಕ್ಕೆ ಕಟ್ಟಿ ಹಾಕಿದ ರೈತರು
ಪಾಟ್ನಾ, ಆ. 27: ಗೊಬ್ಬರವನ್ನು ಶೇಖರಿಸುತ್ತಿದ್ದಾರೆ ಹಾಗೂ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರಕಾರಿ ಅಧಿಕಾರಿಯೊಬ್ಬರನ್ನು ರೈತರು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ.
ಸರಕಾರಿ ಅಧಿಕಾರಿಯನ್ನು ನಿತಿನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಕೃಷಿ ಇಲಾಖೆಯಿಂದ ನಿಯೋಜಿತರಾದ ಸಲಹೆಗಾರ ಕಿಸಾನ್ ಸಲಾಂಖರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮಗೆ ಸಾಕಷ್ಟು ಗೊಬ್ಬರ ಸಿಗುತ್ತಿಲ್ಲ. ಸರಕಾರಿ ಬೆಲೆಗಿಂತ ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಅವರು ಗೊಬ್ಬರ ಮಾರಾಟಗಾರರೊಂದಿಗೆ ಕೈಜೋಡಿಸಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಒಂದು ಗೋಣಿ ಚೀಲ ಯೂರಿಯಾವನ್ನು ಸರಕಾರ 265 ರೂಪಾಯಿಗೆ ಮಾರಾಟ ಮಾಡುತ್ತಿದೆ. ಆದರೆ, ಇದೇ ಗುಣಮಟ್ಟದ ಒಂದು ಗೋಣಿ ಚೀಲ ಯೂರಿಯಾವನ್ನು ಸ್ಥಳೀಯ ಅಂಗಡಿಯವರು 500ರಿಂದ 600 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರಿ ಅಧಿಕಾರಿಯನ್ನು ಕಂಬಕ್ಕೆ ಕಟ್ಟಿ ಹಾಕಿದ ವೀಡಿಯೊ ವೈರಲ್ ಆದ ಕೂಡಲೇ ಸ್ಥಳೀಯ ಆಡಳಿತ ಕಾರ್ಯ ಪ್ರವೃತ್ತವಾಗಿದೆ. ‘‘ನಿತಿನ್ ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ರೈತರನ್ನು ಮನವೊಲಿಸಲಾಗಿದೆ. ಕೃಷಿಗೆ ಅಗತ್ಯ ಇರುವ ಎಲ್ಲ ಸಾಧನಗಳನ್ನು ಸರಕಾರಿ ಬೆಲೆಯಲ್ಲಿ ನೀಡುವ ಭರವಸೆ ನೀಡಲಾಗಿದೆ’’ ಎಂದು ಈ ಪ್ರದೇಶದ ಸರ್ಕಲ್ ಅಧಿಕಾರಿ ತಿಳಿಸಿದ್ದಾರೆ.
खाद की कालाबाज़ारी से तंग आकर मोतिहारी में कृषि सलाहकार को किसानों ने खंभे से बांध दिया @ndtvindia pic.twitter.com/UMfOKrug79
— manish (@manishndtv) August 29, 2022