ಮದರಸಗಳನ್ನು ಕೀಳಾಗಿಸುವ ದುರುದ್ದೇಶಪೂರಿತ ಯತ್ನ; ಜಮೀಯತ್ ಉಲಮಾ ಎ ಹಿಂದ್
ಉ.ಪ್ರ. ಸರಕಾರದಿಂದ ಮದರಸಗಳ ಸಮೀಕ್ಷೆ
ಸಾಂದರ್ಭಿಕ ಚಿತ್ರ
ಲಕ್ನೋ, ಸೆ. 7: ರಾಜ್ಯದಲ್ಲಿ ಮಾನ್ಯತೆ ಪಡೆಯದ ಮದರಸಗಳ ಸಮೀಕ್ಷೆ ನಡೆಸುವ ಉತ್ತರಪ್ರದೇಶದ ನಿರ್ಧಾರ ಮದರಸಗಳನ್ನು ಕೀಳಾಗಿಸುವ ದುರುದ್ದೇಶಪೂರಿತ ಪ್ರಯತ್ನ ಎಂದು ಜಮೀಯತ್ ಉಲಮಾ ಎ ಹಿಂದ್ ಮಂಗಳವಾರ ಹೇಳಿದೆ.
ಮದರಸಗಳನ್ನು ಎಲ್ಲಾ ರೀತಿಯಿಂದಲೂ ಸಂರಕ್ಷಿಸಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯದ 200 ಕ್ಕೂ ಅಧಿಕ ಮದರಸಗಳ ಧರ್ಮ ಗುರುಗಳ ಸಭೆಯಲ್ಲಿ ಮದರಸಗಳಿಗಾಗಿ ಜಮೀಯತ್ ಉಲಮಾ ಎ ಹಿಂದ್ ಸಹಾಯ ವಾಣಿ ಆರಂಭಿಸಿತು. ಅಲ್ಲದೆ, ಆದಿತ್ಯನಾಥ್ ಸರಕಾರದ ನಿರ್ಧಾರದಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ನಿರ್ವಹಿಸಲು ಸಮಿತಿ ರೂಪಿಸಲಾಯಿತು.
ಅಧ್ಯಾಪಕರ ಸಂಖ್ಯೆ, ಪಠ್ಯ ಕ್ರಮ ಹಾಗೂ ಇತರ ಅಂಶಗಳ ಮಾಹಿತಿಯನ್ನು ಸಂಗ್ರಹಿಸಲು ಮಾನ್ಯತೆ ಇಲ್ಲದ ಮದರಸಗಳ ಸಮೀಕ್ಷೆ ನಡೆಸಲಾಗುವುದು ಎಂದು ಉತ್ತರಪ್ರದೇಶ ಸರಕಾರ ಕಳೆದ ವಾರ ಹೇಳಿತ್ತು.
ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆಯ ಆಯೋಗದ ನಿಯಮಕ್ಕೆ ಅನುಗುಣವಾಗಿ ಮದರಸದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಖಾತರಿ ನೀಡಲು ಈ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವ ದಾನಿಶ್ ಅಝಾದ್ ಅನ್ಸಾರಿ ಅವರು ಹೇಳಿದ್ದರು.