ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಗ್ಯಾಂಗ್ಸ್ಟರ್ಗಳಿಗೆ ಸೇರಿದ 50ಕ್ಕೂ ಅಧಿಕ ಸ್ಥಳಗಳಿಗೆ ಎನ್ಐಎ ದಾಳಿ
ಹೊಸದಿಲ್ಲಿ,ಸೆ.12: ಗ್ಯಾಂಗ್ಸ್ಟರ್ಗಳಿಂದ ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆ ಮತ್ತು ಪಾಕಿಸ್ತಾನದಲ್ಲಿಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಅವರ ಸಂಪರ್ಕಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎನ್ಐಎ ಸೋಮವಾರ ಪಂಜಾಬ,ಉತ್ತರ ಪ್ರದೇಶ, ರಾಜಸ್ಥಾನ,ದಿಲ್ಲಿ ಮತ್ತು ಹರ್ಯಾಣದಾದ್ಯಂತ 50ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ.
ಎನ್ಐಎ ಅಧಿಕಾರಿಗಳು ಪಂಜಾಬ ಪೊಲೀಸರೊಂದಿಗೆ ಮುಕ್ತಸರ್ನಲ್ಲಿರುವ ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು ಎಂದೂ ಸುದ್ದಿಸಂಸ್ಥೆಯು ವರದಿ ಮಾಡಿದೆ. ಫೇಸ್ಬುಕ್ ಪೋಸ್ಟ್ನಲ್ಲಿ ಮೂಸೆವಾಲಾ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿದ್ದ ಬ್ರಾರ್,ಕಳೆದ ವರ್ಷ ಅಕಾಲಿ ದಳದ ವಿಕಿ ಮಿಡ್ಡಿಖೇರಾ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆಯನ್ನು ನಡೆಸಲಾಗಿದೆ ಎಂದು ಹೇಳಿದ್ದ.
ಖ್ಯಾತ ಪಂಜಾಬಿ ಗಾಯಕ ಮೂಸೆವಾಲಾರನ್ನು ಮೇ 29ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೂಸೆವಾಲಾ ಹತ್ಯೆಯ ಬಳಿಕ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಈ ಗ್ಯಾಂಗ್ಸ್ಟರ್ಗಳ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸುವಂತೆ ಮತ್ತು ಅವರ ಅಂತರರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಎನ್ಐಎಗೆ ನಿರ್ದೇಶನ ನೀಡಿತ್ತು. ಮೂಸೆವಾಲಾ ಹತ್ಯೆಯ ಪ್ರಮುಖ ಶಂಕಿತರಾಗಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯರನ್ನೂ ತನಿಖೆ ನಡೆಸಲಾಗುತ್ತಿದೆ.