ಅಹ್ಮದ್ನಗರ: ಯುವಕನನ್ನು ಕೊಲೆ ಮಾಡಿ ನದಿಗೆ ಎಸೆದ ದುಷ್ಕರ್ಮಿಗಳು
ಕಾರಣ ಏನು ಗೊತ್ತೇ ?
ಅಹ್ಮದ್ನಗರ: ಇತರ ಧರ್ಮದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಮಹಾರಾಷ್ಟ್ರದ 31 ವರ್ಷದ ಯುವಕನನ್ನು ಹತ್ಯೆ ಮಾಡಿ ಮೃತದೇಹವನ್ನು ನದಿಗೆ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
19 ವರ್ಷ ವಯಸ್ಸಿನ ಯುವತಿ ಜತೆಗೆ ಸಂಬಂಧ ಹೊಂದಿದ್ದ ಎನ್ನಲಾದ ದೀಪಕ್ ಬರ್ಡೆ ಎಂಬವರನ್ನು ಯುವತಿಯ ಕುಟುಂಬದವರು ಹತ್ಯೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಯುವತಿಯ ಕುಟುಂಬದವರು ಈ ಅಪರಾಧವನ್ನು ಒಪ್ಪಿಕೊಂಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ದೀಪಕ್ ಬರ್ಡೆಯ ತಂದೆ ರಾವ್ ಸಾಹೇಬ್ ದಾದಾ ಬರ್ಡೆ ತಮ್ಮ ಮಗ ನಾಪತ್ತೆಯಾಗಿರುವ ಬಗ್ಗೆ ಆಗಸ್ಟ್ 31ರಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 19 ವರ್ಷ ವಯಸ್ಸಿನ ಯುವತಿ ಜತೆಗೆ ಮಗನಿಗೆ ಸಂಬಂಧ ಇತ್ತು. ಇದು ಆಕೆಯ ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ರಾವ್ ಸಾಹೇಬ್ ದೂರಿನಲ್ಲಿ ತಿಳಿಸಿದ್ದರು.
"ಯುವತಿಯ ತಂದೆ ಹಾಗೂ ಸಹೋದರ ಸೇರಿದಂತೆ ಕುಟುಂಬದ ಸದಸ್ಯರನ್ನು ಬಂಧಿಸಲಾಗಿದೆ. ಬರ್ಡೆಯನ್ನು ಮೊಂಡು ಸಾಧನದಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಯುವತಿಯ ತಂದೆ ಒಪ್ಪಿಕೊಂಡಿದ್ದಾನೆ. ಹತ್ಯೆ ಮಾಡಿ ದೇಹವನು ನದಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ" ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮನೋಜ್ ಪಾಟೀಲ್ ಹೇಳಿದ್ದಾರೆ.
ಆರು ದೋಣಿಗಳನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ ಅವಶೇಷಗಳನ್ನು ಇನ್ನೂ ಹುಡುಕಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 342 (ಅಕ್ರಮ ಬಂಧನ), 363 (ಅಪಹರಣ), 34 (ಹಲವು ಮಂದಿ ಸೇರಿ ಮಾಡಿದ ಅಪರಾಧ) ಅನ್ವಯ ಪ್ರಕರಣ ದಾಖಲಿಸಲಾಗಿದೆ.