ವೇದಾಂತ ಬೆನ್ನಲ್ಲೇ ಬಲ್ಕ್ ಡ್ರಗ್ ಪಾರ್ಕ್ ಯೋಜನೆ ಕೂಡ ಮಹಾರಾಷ್ಟ್ರ ಕಳೆದುಕೊಂಡಿದೆ: ಆದಿತ್ಯ ಠಾಕ್ರೆ
ರಾಜ್ಯದ ಯುವಜನತೆ 1 ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದ ಶಿವಸೇನೆ ನಾಯಕ
ಆದಿತ್ಯ ಠಾಕ್ರೆ (File Photo: PTI)
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸ್ಥಾಪನೆಗೊಳಿಸಲುದ್ದೇಶಿಸಲಾಗಿದ್ದ ವೇದಾಂತ-ಫಾಕ್ಸ್ ಕಾನ್ ಯೋಜನೆಯನ್ನು ಗುಜರಾತ್ಗೆ(Gujarat) ಸ್ಥಳಾಂತರಗೊಳಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ(Aaditya Thackeray), ಮಹಾರಾಷ್ಟ್ರ(Maharashtra) ಇನ್ನೊಂದು ಬೃಹತ್ ಡ್ರಗ್ ಪಾರ್ಕ್(Bulk drug park) ಯೋಜನೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ.
"ವೇದಾಂತ-ಫಾಕ್ಸ್ಕಾನ್ ಯೋಜನೆಯನ್ನು ರಾಜ್ಯ ಕಳೆದುಕೊಂಡ ನಂತರ ಹಿಂದಿನ ಮಹಾ ವಿಕಾಸ್ ಅಘಾಡಿ ಸರಕಾರವು ರಾಜ್ಯದಲ್ಲಿ ಸ್ಥಾಪಿಸಲು ಬಹಳಷ್ಟು ಶ್ರಮವಹಿಸಿದ್ದ ಬಲ್ಕ್ ಡ್ರಗ್ ಪಾರ್ಕ್ ಗುಜರಾತ್, ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಹೋಗಿವೆ,'' ಎಂದು ಆದಿತ್ಯ ಸುದ್ದಿಗಾರರಿಗೆ ತಿಳಿಸಿದರು.
"ಮಹಾರಾಷ್ಟ್ರದ ಅಸಂವಿಧಾನಿಕ ಸರಕಾರ 40 (ಸೇನಾ) ಶಾಸಕರನ್ನು ಸೆಳೆದಿದ್ದು ಮಾತ್ರವಲ್ಲದೆ ಎರಡು ಪ್ರಮುಖ ರಾಜ್ಯ ಯೋಜನೆಗಳನ್ನೂ ಕಸಿದಿವೆ,'' ಎಂದು ಅವರು ಹೇಳಿದರು.
ಇತರ ರಾಜ್ಯಗಳು ಈ ಯೋಜನೆ ಪಡೆದುಕೊಂಡಿರುವುದರ ಬಗ್ಗೆ ತಾವು ದೂರುವುದಿಲ್ಲ ಆದರೆ ಮಹಾರಾಷ್ಟ್ರ ಸರಕಾರ ಈ ವಿಚಾರವನ್ನು ಕೇಂದ್ರದ ಜೊತೆಗೆ ಏಕೆ ಪ್ರಸ್ತಾಪಿಸಿಲ್ಲ, ರಾಜ್ಯದ ಯುವಜನತೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಕಳೆದುಕೊಂಡಿದ್ದಾರೆ. ಸಚಿವರು ರಾಜಕೀಯ ಮಾಡುವುದು ಬಿಟ್ಟು ಆಡಳಿತದತ್ತ ಗಮನ ಹರಿಸುವರೇ?'' ಎಂದು ಅವರು ಪ್ರಶ್ನಿಸಿದರು.
ಬಲ್ಕ್ ಡ್ರಗ್ ಪಾರ್ಕ್ ಸ್ಥಾಪನೆಗೆ ಸೆಪ್ಟೆಂಬರ್ 1 ರಂದು ಕೇಂದ್ರ ಸರಕಾರವು ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸರಕಾರಗಳಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು.
ಇದನ್ನೂ ಓದಿ: ಮೇಲ್ಜಾತಿಯವರಿಗೆ ಇರಿಸಲಾಗಿದ್ದ ಮಡಕೆಯ ನೀರು ಕುಡಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ