ಬಿಜೆಪಿ ಸಂಸದ ಮಹೇಶ್ ಶರ್ಮಾರಿಂದ ಬೆದರಿಕೆ: ಬಂಧಿತ ಶ್ರೀಕಾಂತ್ ತ್ಯಾಗಿಯ ಪತ್ನಿ ಆರೋಪ
ನೋಯ್ಡಾ: ಗೌತಮಬುದ್ಧ ನಗರದ ಸಂಸದ ಮಹೇಶ್ ಶರ್ಮಾ ಅವರು ತನಗೆ ಬೆದರಿಕೆ ಹಾಕಿದ್ದಾರೆ ಎಂದು, ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬಂಧಿತನಾಗಿರುವ ಯುವ ಮುಖಂಡ ಶ್ರೀಕಾಂತ್ ತ್ಯಾಗಿಯ ಪತ್ನಿ ಅನು ತ್ಯಾಗಿ ಆಪಾದಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಬಿಜೆಪಿ ಆಗ್ರಹಿಸಿದೆ.
ಶ್ರೀಕಾಂತ್ ತ್ಯಾಗಿ ಬಂಧನ ವಿರೋಧಿಸಿ ಸೆಕ್ಟರ್ 93ಬಿಯಲ್ಲಿನ ಗ್ರ್ಯಾಂಡ್ ಒಮಕ್ಸ್ ಸೊಸೈಟಿಯ ಹೊರಗೆ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅನು ತ್ಯಾಗಿ, ಸಂಸದರ ವಿರುದ್ಧ ಈ ಆರೋಪ ಮಾಡಿದರು.
"ನನ್ನ ಹೋರಾಟ ಇರುವುದು ಮಹೇಶ್ ಶರ್ಮಾ ವಿರುದ್ಧ ಮಾತ್ರ. ಅವರಿಂದ ನಮಗೆ ಬೆದರಿಕೆ ಇದೆ. ನನಗೆ ಭದ್ರತೆ ಬೇಕು" ಎಂದು ಅವರು ಹೇಳಿದರು. ಶ್ರೀಕಾಂತ್ ತ್ಯಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾದ ವಿವಾದದ ಹಿನ್ನೆಲೆಯಲ್ಲಿ ಮಹೇಶ್ ಶರ್ಮಾ ಆಗಸ್ಟ್ 6ರಂದು ಗ್ರ್ಯಾಂಡ್ ಒಮಕ್ಸ್ ಸೊಸೈಟಿಗೆ ಭೇಟಿ ನೀಡಿದ್ದರು.
ಅನು ತ್ಯಾಗಿ ಬುಧವಾರ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಯಲಿ ಎಂದು ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ndtv.com ವರದಿ ಮಾಡಿದೆ.