'ನವರಾತ್ರಿ ವೇಳೆ ಉಪವಾಸ ಬದಲು ಮಹಿಳೆಯರು ಸಂವಿಧಾನ ಓದಬೇಕು' ಎಂದ ದಲಿತ ಉಪನ್ಯಾಸಕನನ್ನು ಕೈಬಿಟ್ಟ ಕಾಶಿ ವಿದ್ಯಾ ಪೀಠ
Photo: www.mgkvp.ac.in
ವಾರಣಾಸಿ: "ಮಹಿಳೆಯರು ನವರಾತ್ರಿ ಸಂದರ್ಭ ಒಂಬತ್ತು ದಿನ ಉಪವಾಸ ಕೈಗೊಳ್ಳುವ ಬದಲು ಆ ಒಂಬತ್ತು ದಿನಗಳಲ್ಲಿ ಭಾರತದ ಸಂವಿಧಾನ ಹಾಗೂ ಹಿಂದು ಸಂಹಿತೆ ಮಸೂದೆಯನ್ನು ಓದಿದರೆ ಅವರ ಜೀವನವು ಗುಲಾಮಗಿರಿ ಮತ್ತು ಭಯದಿಂದ ಮುಕ್ತವಾಗುತ್ತದೆ, ಜೈ ಭೀಮ್," ಎಂಬ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ ದಲಿತ ಅತಿಥಿ ಉಪನ್ಯಾಸಕರೊಬ್ಬರನ್ನು ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ಸೇವೆಯಿಂದ ಕಿತ್ತೊಗೆಯಲಾಗಿದೆಯಲ್ಲದೆ ವಿವಿ ಆವರಣ ಪ್ರವೇಶಕ್ಕೂ ಅವರ ಮೇಲೆ ನಿರ್ಬಂಧ ಹೇರಲಾಗಿದೆ.
ಶಿಸ್ತುಕ್ರಮಕ್ಕೆ ಒಳಗಾಗಿರುವ ಉಪನ್ಯಾಸಕ ಮಿಥಿಲೇಶ್ ಕುಮಾರ್ ಗೌತಮ್ ವಿದ್ಯಾಪೀಠದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾಗಿದ್ದರು.
ಅವರ ಪೋಸ್ಟ್ ಕುರಿತಂತೆ ಎಬಿವಿಪಿ ಕಾರ್ಯಕರ್ತರು ದೂರಿದ ನಂತರ ವಿವಿ ಕುಲಸಚಿವರು ಉಪನ್ಯಾಸಕನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ, ಉಪನ್ಯಾಸಕನ ಕ್ರಮದಿಂದ ವಿದ್ಯಾರ್ಥಿಗಳಲ್ಲಿ ವ್ಯಾಪಕ ಆಕ್ರೋಶವಿದೆ, ಇದು ವಿವಿಯ ಪರಿಸರ ಮತ್ತು ಪರೀಕ್ಷೆಗಳ ವೇಳೆಯೂ ಪರಿಣಾಮ ಬೀರಬಹುದು ಎಂಬ ಕಾರಣ ನೀಡಿ ಉಪನ್ಯಾಸಕನನ್ನು ಕೈಬಿಡಲಾಗಿದೆ.
ಗುರುವಾರ ವಿವಿ ಕ್ಯಾಂಪಸ್ನಲ್ಲಿ ಕೆಲ ವಿದ್ಯಾರ್ಥಿಗಳು ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಭಟನೆಯನ್ನೂ ನಡೆಸಿದ್ದಾರೆ.