ಚುನಾವಣಾ ಆಯೋಗಕ್ಕೆ ಮೂರು ಹೆಸರು, ಚಿಹ್ನೆಗಳ ಪಟ್ಟಿಯನ್ನು ನೀಡಿದ ಉದ್ಧವ್ ಠಾಕ್ರೆ ಬಣ
Photo:PTI
ಹೊಸದಿಲ್ಲಿ: ಮುಂಬೈನ ಅಂಧೇರಿ ಪೂರ್ವದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮೂರು ಹೆಸರು ಹಾಗೂ ಚಿಹ್ನೆಗಳ ಪಟ್ಟಿಯನ್ನು ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಪಕ್ಷದ ಹೆಸರಿಗೆ 'ಶಿವಸೇನ ಬಾಳಾಸಾಹೇಬ್ ಠಾಕ್ರೆ' ಮೊದಲ ಆಯ್ಕೆ ಹಾಗೂ 'ಶಿವಸೇನ ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಎರಡನೇ ಆಯ್ಕೆಯಾಗಿದೆ. ತ್ರಿಶೂಲವನ್ನು (ತ್ರಿಶೂಲ) ತನ್ನ ಮೊದಲ ಆಯ್ಕೆಯ ಚಿಹ್ನೆಯಾಗಿ ಹಾಗೂ 'ಉದಯಿಸುವ ಸೂರ್ಯ'ನನ್ನು ಎರಡನೇ ಆಯ್ಕೆಯ ಚಿಹ್ನೆಯಾಗಿ ಕೇಳಿದೆ.
ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಇಬ್ಬರೂ ಇಂದು ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ
1989 ರಲ್ಲಿ ಶಿವಸೇನೆಯು ತನ್ನ ಖಾಯಂ ಚಿಹ್ನೆಯಾದ ಬಿಲ್ಲು ಹಾಗೂ ಬಾಣವನ್ನು ಪಡೆದುಕೊಂಡಿತ್ತು. ಅದಕ್ಕೂ ಮೊದಲು ಶಿವಸೇನೆಯು ಕತ್ತಿ ಹಾಗೂ ಗುರಾಣಿ, ತೆಂಗಿನ ಮರ, ರೈಲ್ವೇ ಇಂಜಿನ್ , ಕಪ್ ಮತ್ತು ತಟ್ಟೆಯಂತಹ ವಿಭಿನ್ನ ಚಿಹ್ನೆಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.
ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಬಣಗಳ ನಡುವಿನ ವಿವಾದದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನಿನ್ನೆ ಶಿವಸೇನೆ ಹೆಸರು ಹಾಗೂ ಅದರ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ತಡೆ ಹಿಡಿದಿತ್ತು. ಅದರಲ್ಲಿ ಮೂರು ಹೆಸರುಗಳು ಹಾಗೂ ಚಿಹ್ನೆಗಳ ಪಟ್ಟಿಯನ್ನು ನೀಡುವಂತೆ ಎರಡೂ ಬಣಕ್ಕೆ ತಿಳಿಸಿತ್ತು. ಚುನಾವಣೆ ಆಯೋಗವು ಒಂದೊಂದು ಚಿಹ್ನೆ ಹಂಚಲಿದೆ.