ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನ
Photo:PTI
ಹೊಸದಿಲ್ಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ Mulayam Singh Yadav ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮುಲಾಯಂ ಸಿಂಗ್ ಯಾದವ್ ಅವರು ಉಸಿರಾಟದ ಸಮಸ್ಯೆ ಹಾಗೂ ರಕ್ತದೊತ್ತಡದಿಂದಾಗಿ ಆಗಸ್ಟ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 1ರಂದು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ವೈದ್ಯರ ತಂಡ ಯಾದವ್ ಅವರ ಮೇಲೆ ನಿಗಾ ಇರಿಸಿತ್ತು.
ಸಮಾಜವಾದಿ ಪಕ್ಷದ ಬೆಂಬಲಿಗರು ಹಾಗೂ ನಾಯಕರಿಂದ "ನೇತಾಜಿ" ಎಂದು ಕರೆಯಲ್ಪಡುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ದೇಶದ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಮುಲಾಯಂ 1939 ನವೆಂಬರ್ 22ರಂದು ಜನಿಸಿದರು. 1992ರಲ್ಲಿ ಸಮಾಜ ವಾದಿ ಪಕ್ಷ ಸ್ಥಾಪಿಸಿದ್ದರು. ಮೂರು ಬಾರಿ 1989, 1993 ಹಾಗೂ 2003ರಲ್ಲಿ ಉತ್ತರಪ್ರದೇಶ ಸಿಎಂ ಆಗಿದ್ದರು. 1996-98ರಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1967ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಮುಲಾಯಂ 8 ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
1996ರಲ್ಲಿ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರಲ್ಲಿ ಮೈನ್ಪುರಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.