ಹಿಜಾಬ್ ವಿವಾದ: ಕರ್ನಾಟಕ ಸರಕಾರ ಹೇರಿದ್ದ ನಿಷೇಧದ ಸಿಂಧುತ್ವ ಕುರಿತು ಈ ವಾರ ತೀರ್ಪು ಪ್ರಕಟಿಸಲಿರುವ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರು ತರಗತಿಗಳಿಗೆ ಹಿಜಾಬ್(hijab ban) ಸಹಿತ ಯಾವುದೇ ಧಾರ್ಮಿಕ ಉಡುಗೆ ಧರಿಸುವುದನ್ನು ನಿಷೇಧಿಸಿ ಕರ್ನಾಟಕ(Karnataka) ಸರಕಾರ ಈ ವರ್ಷದ ಫೆಬ್ರವರಿ 5 ರಂದು ಹೊರಡಿಸಿದ ಅಧಿಸೂಚನೆಯ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್(Supreme Court) ಈ ವಾರ ತನ್ನ ತೀರ್ಪು ಪ್ರಕಟಿಸಲಿದೆ.
ತನ್ನ ಅಧಿಸೂಚನೆ ಒಂದು 'ಜಾತ್ಯತೀತ ನಿರ್ಧಾರ' ಎಂದು ಕರ್ನಾಟಕ ಸರಕಾರ ಹೇಳಿತ್ತಲ್ಲದೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ವಿಚಾರಗಳಲ್ಲಿ ತೊಡಗುವುದನ್ನು ತಡೆಯುವ ಹೊರತಾಗಿ ಅವರಿಗೆ ಮುಕ್ತ ಮನಸ್ಸಿನಿಂದ ಶಿಕ್ಷಣ ಪಡೆಯಲು ಅನುಕೂಲಕರ ವಾತಾವರಣ ಕಲ್ಪಿಸುವ ಉದ್ದೇಶವಿದೆ ಎಂದು ಸರಕಾರ ಹೇಳಿತ್ತು.
ಹಿಜಾಬ್ ನಿಷೇಧವನ್ನು ವಿರೋಧಿಸಿದವರು, ಧಾರ್ಮಿಕ ಸ್ವಾತಂತ್ರ್ಯ ಮತ್ತಿತರ ಅಂಶಗಳನ್ನು ಉಲ್ಲೇಖಿಸಿದ್ದರು. ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹಿಜಾಬ್ ಪರ 26 ಅರ್ಜಿಗಳ ಮೇಲಿನ ತೀರ್ಪನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಕಾದಿರಿಸಿತ್ತು. ಅರ್ಜಿದಾರರ ಪರ 21 ವಕೀಲರು ವಾದಿಸಿದ್ದರೆ, ಪ್ರತಿವಾದಿಗಳ ಪರ ಆರು ವಕೀಲರು ವಾದಿಸಿದ್ದಾರೆ.
ಎರಡು ವಾರಗಳ ಅವಧಿಯಲ್ಲಿ 10 ದಿನಗಳ ಕಾಲ ವಿಚಾರಣೆ ನಡೆದಿದೆ. ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿದಾರರ ಪರ ವಾದಿಸಿದ್ದ ವಕೀಲರಲ್ಲಿ ಹಿರಿಯ ವಕೀಲರಾದ ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ದೇವದತ್ತ್ ಕಾಮತ್, ಸಂಜಯ್ ಹೆಗಡೆ ಮತ್ತು ಮೀನಾಕ್ಷಿ ಅರೋರಾ ಸೇರಿದ್ದಾರೆ. ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ವಾದಿಸಿದ್ದರು.