ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಉದ್ಧವ್ ಠಾಕ್ರೆ
Photo: Pti
ಹೊಸದಿಲ್ಲಿ, ಅ. 10: ನೈಜ ಶಿವಸೇನೆ ಯಾವುದು ಎಂಬ ಕುರಿತು ಎರಡು ಬಣಗಳ ಬಿಕ್ಕಟ್ಟಿನ ನಡುವೆ ಶಿವಸೇನಾ ಹೆಸರು ಹಾಗೂ ಚಿಹ್ನೆ ಬಳಸದಂತೆ ಚುನಾವಣಾ ಆಯೋಗ ನೀಡಿದ ಆದೇಶವನ್ನು ಪ್ರಶ್ನಿಸಿ ಉದ್ದವ್ ಠಾಕ್ರೆ ಸೋಮವಾರ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಚುನಾವಣಾ ಆಯೋಗ ಶನಿವಾರ ನೀಡಿದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಮುಂಬರುವ ಮುಂಬೈಯ ಅಂಧೇರಿ ಪೂರ್ವ ಉಪ ಚುನಾವಣೆಯಲ್ಲಿ ನೂತನ ಹೆಸರು ಹಾಗೂ ಚಿಹ್ನೆ ಆಯ್ಕೆ ಮಾಡುವಂತೆ ಉದ್ಧವ್ ಠಾಕ್ರೆ ಹಾಗೂ ಪ್ರತಿಸ್ಪರ್ಧಿ ಏಕನಾಥ ಶಿಂದೆ ಬಣಕ್ಕೆ ಚುನಾವಣಾ ಆಯೋಗ ಸೂಚಿಸಿತ್ತು.
ಪಕ್ಷದ ಹೆಸರು ಹಾಗೂ ಚಿಹ್ನೆಯ ಕುರಿತು ತಮ್ಮ ಪ್ರತಿಪಾದನೆಯನ್ನು ಬೆಂಬಲಿಸುವ ದಾಖಲೆಗಳನ್ನು ಸಲ್ಲಿಸುವಂತೆ ಎರಡೂ ಪ್ರತಿಸ್ಪರ್ಧಿ ಬಣಗಳಿಗೆ ಚುನಾವಣಾ ಆಯೋಗ ಈ ಹಿಂದೆ ಸೂಚಿಸಿತ್ತು. ಠಾಕ್ರೆ ಬಣದ ಮನವಿಯ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಲ್ಲಿಸಲು ಅಂತಿಮ ಗಡುವನ್ನು ಅಕ್ಟೋಬರ್ ೭ಕ್ಕೆ ವಿಸ್ತರಿಸಲಾಗಿದೆ. ವಿಧಾನ ಸಭೆ ಉಪ ಚುನಾವಣೆಗೆ ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ನೀಡುವಂತೆ ಶಿಂದೆ ಬಣ ಅಕ್ಟೋಬರ್ 4 ರಂದು ಕೇಳಿತ್ತು. ಠಾಕ್ರೆ ಬಣ ಶನಿವಾರ ತನ್ನ ಪ್ರತಿಕ್ರಿಯೆ ಸಲ್ಲಿಸಿತು ಹಾಗೂ ಪ್ರತಿಸ್ಪರ್ಧಿ ಬಣ ಸಲ್ಲಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಅರ್ಥ ಮಾಡಿಕೊಳ್ಳಲು ಮತ್ತೆ ನಾಲ್ಕು ವಾರಗಳ ಕಾಲಾವಕಾಶ ಕೋರಿತ್ತು.