ಮರಳು ತುಂಬಿದ ದೋಣಿ ಮುಳುಗಿ ಐವರು ಕಾರ್ಮಿಕರು ನೀರುಪಾಲು
ಪಾಟ್ನಾ: ಗಂಗಾನದಿಯಲ್ಲಿ ಮರಳು ತಂಬಿದ್ದ ದೋಣಿಯೊಂದು ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಐದು ಮಂದಿ ಕಾರ್ಮಿಕರು ಜಲ ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ರವಿವಾರ ಸಂಜೆ ಈ ದುರಂತ ಸಂಭವಿಸಿದ್ದು, ಮತ್ತೊಂದು ಕಡೆಯಿಂದ ಬರುತ್ತಿದ್ದ ಇನ್ನೊಂದು ದೋಣಿಯಲ್ಲಿದ್ದವರು ಎಂಟು ಮಂದಿ ಕಾರ್ಮಿಕರನ್ನು ಬಿದಿರಿನ ಸಹಾಯದಿಂದ ರಕ್ಷಿಸಿದ್ದಾರೆ.
ನದಿ ನೀರಿನ ಸೆಳೆತ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಮರಳು ತುಂಬಿದ್ದ ನಾಡದೋಣಿ ದಿಘಾ ಸಮೀಪ ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದಾಗ ನಿಯಂತ್ರಣ ಕಳೆದುಕೊಂಡಿತು. ಎಸ್ಡಿಆರ್ಎಫ್ (SDRF)ನ ನಾಲ್ಕು ತಂಡಗಳು, ಪ್ರವಾಹ ಪರಿಹಾರ ಪಡೆ ಮತ್ತು ಸ್ಥಳೀಯ ಮುಳುಗುಗಾರರು ಐದು ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಔರಂಗಾಬಾದ್ ಜಿಲ್ಲೆಯ ಕುಸ್ಮಾರ ಘಾಟ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಐದು ಮಂದಿ ನೀರುಪಾಲಾಗಿದ್ದು, ಈ ಪೈಕಿ ನಾಲ್ಕು ಮಂದಿ ಬಾಲಕಿಯರು 12 ರಿಂದ 16 ವರ್ಷ ವಯಸ್ಸಿನವರು ಎನ್ನಲಾಗಿದೆ. ಬಾಲಕಿಯರನ್ನು ರಕ್ಷಿಸಲು ಮುಂದಾದ ವ್ಯಕ್ತಿಯೊಬ್ಬ ಕೂಡಾ ನೀರುಪಾಲಾಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.