ಬೆಲೆ ವಿವಾದ: ಗ್ರಾಹಕನಿಗೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲಕ !
ಜಗಪುರ (ಒಡಿಶಾ): ಒಡಿಶಾದ ಜಗಪುರ ಜಿಲ್ಲೆಯ ಹೋಟೆಲ್ ಮಾಲಕನೊಬ್ಬ, ಆಹಾರದ ಗುಣಮಟ್ಟ ಮತ್ತು ಬೆಲೆಯ ಸಂಬಂಧ ಜಗಳವಾಡಿದ ಗ್ರಾಹಕನೊಬ್ಬನ ಮೇಲೆ ಬಿಸಿ ಎಣ್ಣೆ ಸುರಿದ ಘಟನೆ ವರದಿಯಾಗಿದೆ.
ಘಟನೆಯಲ್ಲಿ 48 ವರ್ಷ ವಯಸ್ಸಿನ ಪ್ರಸಂಜೀತ್ ಪರೀದಾ ಎಂಬವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಕಟಕ್ನಿಂದ 45 ಕಿಲೋಮೀಟರ್ ದೂರದ ಬಲಿಚಂದ್ರಪುರ ಎಂಬ ಗ್ರಾಮದ ನಿವಾಸಿ ಪ್ರಸಂಜೀತ್ ಪರೀದಾ ಸ್ಥಳೀಯ ಮಾರುಕಟ್ಟೆಯಲ್ಲಿ ಹೋಟೆಲ್ಗೆ ತೆರಳಿದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಹೋಟೆಲ್ನ ಆಹಾರದ ಗುಣಮಟ್ಟದ ಬಗ್ಗೆ ಮಾಲಕ ಪ್ರವಾಕರ್ ಸಾಹೂ ಎಂಬಾತನಿಗೆ ಗ್ರಾಹಕ ದೂರು ನೀಡಿದ್ದಾರೆ. ಬಳಿಕ ಗ್ರಾಹಕ ಹಾಗೂ ಮಾಲಕನ ಮಧ್ಯೆ ಬೆಲೆಯ ವಿಚಾರದಲ್ಲೂ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪ್ರವಾಕರ್ ಸಾಹೂ, ಕುದಿಯುವ ಎಣ್ಣೆ ತಂದು ಗ್ರಾಹಕನ ಮೇಲೆ ಸುರಿದಿದ್ದಾನೆ ಎನ್ನಲಾಗಿದೆ. ಮುಖ, ಕತ್ತು, ಎದೆ, ಹೊಟ್ಟೆ ಮತ್ತು ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಕಟಕ್ನ ಎಸ್ಬಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ndtv.com ವರದಿ ಮಾಡಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಬಲಿಚಂದ್ರಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಮಾಕಾಂತ ಮುದುಲಿ ಹೇಳಿದ್ದಾರೆ.