ಕೊಯಮತ್ತೂರು ಕಾರ್ ಸ್ಪೋಟ ಪ್ರಕರಣ: ತನಿಖೆಯನ್ನು ಎನ್ಐಎಗೆ ಶಿಫಾರಸ್ಸು ಮಾಡಲು ತಮಿಳುನಾಡು ಸರ್ಕಾರ ನಿರ್ಧಾರ
ಚೆನ್ನೈ: ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಎನ್ಐಎ ತನಿಖೆಗೆ ಶಿಫಾರಸ್ಸು ಮಾಡುವುದಾಗಿ ತಮಿಳುನಾಡು ಸರ್ಕಾರ ಹೇಳಿದೆ ಎಂದು HindustanTimes.com ವರದಿ ಮಾಡಿದೆ.
ಘಟನೆಗಳ ಸಂಭವನೀಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ರವಿವಾರದಂದು, ಕೊಯಮತ್ತೂರಿನ ಸೂಕ್ಷ್ಮ ಪ್ರದೇಶವಾದ ಉಕ್ಕಡಂನ ದೇವಸ್ಥಾನದ ಬಳಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಹೊಂದಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದ ಜಮೇಶಾ ಮುಬೀನ್ ಎಂಬಾತ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ.
ತನಿಖೆಯ ವೇಳೆ, ಪೊಲೀಸರು ಮುಬೀನ್ ಮನೆಯಿಂದ ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಸಲ್ಫರ್ ಮತ್ತು ಇದ್ದಿಲಿನಂತಹ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಲಾಗಿದ್ದು, ಅವರನ್ನು ಮಹಮ್ಮದ್ ಥಲ್ಕಾ (25), ಮಹಮ್ಮದ್ ಅಸರುದ್ದೀನ್ (25), ಮಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27) ಮತ್ತು ಮಹಮ್ಮದ್ ನವಾಝ್ ಇಸ್ಮಾಯಿಲ್ (27) ಎಂದು ಗುರುತಿಸಲಾಗಿದೆ.
ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸುವ ಕುರಿತು ಇಲಾಖೆಗೆ ಇನ್ನೂ ಮಾಹಿತಿ ಬರಬೇಕಿದೆ ಎಂದು ಕೊಯಮತ್ತೂರು ಪೊಲೀಸ್ ಆಯುಕ್ತ ಬಾಲಕೃಷ್ಣನ್ ಬುಧವಾರ ಹೇಳಿದ್ದಾರೆ. "ತಮಿಳುನಾಡು ಸಿಎಂ ಎನ್ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ. ನಾವು ಎಲ್ಲಾ ಸೂಚನೆಗಳನ್ನು ಪಡೆದ ನಂತರ ಕಾರ್ಯವಿಧಾನವನ್ನು ಅನುಸರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
ಈವರೆಗೆ ನಡೆಸಿದ ತನಿಖೆಯಲ್ಲಿ ಸ್ಫೋಟಕ್ಕೆ ಬಳಸಿದ ಹಲವು ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿಸಿರುವುದು ಬೆಳಕಿಗೆ ಬಂದಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.