ಜಾರ್ಖಂಡ್: ಐಟಿ ಅಧಿಕಾರಿಗಳು ದಾಳಿಗೆ ಆಗಮಿಸಿದ ಕಾರಿನಲ್ಲಿ ಬಿಜೆಪಿ ಸ್ಟಿಕ್ಕರ್!
ರಾಂಚಿ: ಜಾರ್ಖಂಡ್ನಲ್ಲಿ ಶುಕ್ರವಾರ ಕಾಂಗ್ರೆಸ್ (Congress) ಶಾಸಕರೊಬ್ಬರ ನಿವಾಸದ ಮೇಲೆ ನಡೆದ ಐಟಿ ಅಧಿಕಾರಿಗಳ ದಾಳಿಯೊಂದರ ವೇಳೆ ಆಗಮಿಸಿದ್ದ ವಾಹನವೊಂದರಲ್ಲಿ ಬಿಜೆಪಿ ಸ್ಟಿಕ್ಕರ್ (BJP sticker) ಇದ್ದಿರುವುದು ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ ಎಂದು timesofindia ವರದಿ ಮಾಡಿದೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಸ್ತ್ರ ಹರಿಸಿದರೆ ಇದನ್ನೊಂದು ಸಂಚು ಎಂದು ಬಿಜೆಪಿ ಬಣ್ಣಿಸಿದೆ.
ಪೊರೆಯಹಟ್ ಮತ್ತು ಬರ್ಮೊ ಕ್ಷೇತ್ರಗಳನ್ನು ಕ್ರಮವಾಗಿ ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರಾದ ಪ್ರದೀಪ್ ಯಾದವ್ ಮತ್ತು ಕುಮಾರ್ ಜೈಮಂಗಲ್ ಆಲಿಯಾಸ್ ಅನೂಪ್ ಸಿಂಗ್ ಅವರಿಗೆ ಸೇರಿದ ಹಲವಾರು ಸ್ಥಳಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆದಿತ್ತು. ಬೆರ್ಮೋದಲ್ಲಿರುವ ಜೈಮಂಗಲ್ ಅವರಿಗೆ ಸೇರಿದ ಸ್ಥಳದಲ್ಲಿ ಐಟಿ ದಾಳಿ ನಡೆಯುತ್ತಿರುವಾಗ ಬಿಜೆಪಿ ಸ್ಟಿಕ್ಕರ್ (ವಿಧಾನಸಭೆಯ ಪಾಸ್) ಇರುವ ಒಂದು ಕಾರು ಕಂಡು ಬಂದಿತ್ತು. ಈ ವಾಹನದಲ್ಲಿ ಐಟಿ ಅಧಿಕಾರಿಗಳು ಆಗಮಿಸಿದ್ದರು.
ಈ ಸ್ಟಿಕ್ಕರ್ ಅನ್ನು ನಂತರ ತೆಗೆದುಹಾಕಲಾಯಿತಾದರೂ ಅದಾಗಲೇ ಅದು ವಿಪಕ್ಷಗಳ ಬಾಯಿಗೆ ಆಹಾರವಾಯಿತಲ್ಲದೆ ಬಿಜೆಪಿ ಸ್ಟಿಕ್ಕರ್ ಇರುವ ಕಾರಿನ ಫೋಟೋ ಹಾಗೂ ವೀಡಿಯೋ ವೈರಲ್ ಆಗಿತ್ತು.
ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಕ್ಕೆ ತೊಂದರೆಯುಂಟು ಮಾಡಲು ಈ ದಾಳಿಗಳನ್ನು ಏಕೆ ನಡೆಸಲಾಯಿತು ಎಂದು ಬಿಜೆಪಿ ಜನರಿಗೆ ವಿವರಿಸಬೇಕಿದೆ ಎಂದು ಮುಖ್ಯಮಂತ್ರಿ ಸೊರೇನ್ ಆಗ್ರಹಿಸಿದ್ದಾರೆ.
ಆದರೆ ಬಿಜೆಪಿ ಪಾತ್ರ ಈ ಘಟನೆಯನ್ನು ಪಕ್ಷದ ಮಾನಹಾನಿಗೈಯ್ಯಲು ಎದುರಾಳಿಗಳು ನಡೆಸಿದ ಸಂಚು ಎಂದು ಬಣ್ಣಿಸಿದೆ. ʻʻಇದು ಕಾಂಗ್ರೆಸ್ ಕಾರ್ಯಕರ್ತರ ಸಂಚಾಗಿರಬಹುದು. ಇಂತಹ ವಾಹನಗಳು ಬಾಡಿಗೆಗೆ ದೊರೆಯುತ್ತವೆಯೆಂದು ಎಲ್ಲರಿಗೂ ಗೊತ್ತು. ಆದುದರಿಂದ ಈ ದಾಳಿಗಳಿಗೂ ಬಿಜೆಪಿಗೂ ನಂಟು ಕಲ್ಪಿಸುವುದು ಸರಿಯಲ್ಲ,ʼʼ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದೀಪಕ್ ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಉದ್ಯೋಗಿಯ ಹನಿಟ್ರ್ಯಾಪ್ ಆರೋಪ: ಇಬ್ಬರು ಮಹಿಳೆಯರು ಸೇರಿ 10 ಮಂದಿಯ ಬಂಧನ