ಬಿಜೆಪಿ ಪ್ರತಿದಿನವೂ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ: ರಾಹುಲ್ ಗಾಂಧಿ
ವಾಶಿಮ್ (ಮಹಾರಾಷ್ಟ್ರ),ನ.15: ದಲಿತರು,ಆದಿವಾಸಿಗಳು ಮತ್ತು ಬಡವರು ತಮ್ಮ ಹಕ್ಕುಗಳನ್ನು ಪಡೆಯಬೇಕು ಎನ್ನುವದನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ,ಹೀಗಾಗಿ ಅದು ಪ್ರತಿದಿನವೂ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರು ಮಂಗಳವಾರ ಇಲ್ಲಿ ಆರೋಪಿಸಿದರು.
ಬುಡಕಟ್ಟು ಸ್ವಾತಂತ್ರ ಹೋರಾಟಗಾರ ಬಿರ್ಸಾ ಮುಂಡಾ (Birsa Munda)ಅವರ ಜನ್ಮ ದಿನಾಚರಣೆ ಸಂದರ್ಭ ವಾಶಿಮ್ (Washim)ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್,ಬುಡಕಟ್ಟು ಜನರು ಈ ದೇಶದ ಮೂಲ ಮಾಲಿಕರಾಗಿದ್ದಾರೆ ಮತ್ತು ಇತರರಿಗಿಂತ ಅವರ ಹಕ್ಕುಗಳು ಆದ್ಯತೆಯನ್ನು ಹೊಂದಿವೆ ಎಂದರು. ಬುಡಕಟ್ಟು ಸಮುದಾಯಗಳ ಹಲವಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.
ಆರೆಸ್ಸೆಸ್ ಮತ್ತು ಬಿಜೆಪಿ ಬಿರ್ಸಾ ಮುಂಡಾ ಅವರ ಆದರ್ಶಗಳ ಮೇಲೆ ನಾಲ್ಕೂ ಕಡೆಗಳಿಂದಲೂ ದಾಳಿ ನಡೆಸುತ್ತಿವೆ ಎಂದು ರಾಹುಲ್ ಆರೋಪಿಸಿದರು. ರಾಹುಲ್ ನೇತೃತ್ವದ ಭಾರತ ಜೋಡೊ ಯಾತ್ರೆ ಮಂಗಳವಾರ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಯನ್ನು ಪ್ರವೇಶಿಸಿದೆ.