ಗುಜರಾತ್ ವಿಧಾನ ಸಭೆ ಚುನಾವಣೆ : 1 ರೂ. ನಾಣ್ಯದ 10 ಸಾವಿರ ರೂ. ಠೇವಣಿ ಇರಿಸಿದ ಕೂಲಿ ಕಾರ್ಮಿಕ ಅಭ್ಯರ್ಥಿ
ಅಹ್ಮದಾಬಾದ್ (ಗುಜರಾತ್), ನ. 20: ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ದಿನಗೂಲಿ ಕಾರ್ಮಿಕನೋರ್ವ 1 ರೂ. ನಾಣ್ಯದಲ್ಲಿ 10 ಸಾವಿರ ರೂ.ವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇರಿಸಿದ್ದಾರೆ.
ಹೊಟೇಲ್ ನಿರ್ಮಾಣಕ್ಕಾಗಿ ಗುಜರಾತ್ನ ಗಾಂಧಿ ನಗರದಲ್ಲಿರುವ ಕೊಳಗೇರಿಯನ್ನು 2019ರಲ್ಲಿ ನೆಲಸಮ ಮಾಡಲಾಗಿತ್ತು. ಇಲ್ಲಿನ ನಿವಾಸಿಯಾಗಿದ್ದ ಹಾಗೂ ದಿನಗೂಲಿ ನೌಕರನಾಗಿರುವ ಮಹೇಂದ್ರ ಪಾಟ್ನಿ ತನ್ನ ಬೆಂಬಲಿಗರಿಂದ ಈ 1 ರೂ. ನಾಣ್ಯದಲ್ಲಿ 10 ಸಾವಿರ ರೂ.ವನ್ನು ಸ್ವೀಕರಿಸಿದ್ದಾರೆ.
ಗಾಂಧಿ ನಗರದ ಉತ್ತರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಹೇಂದ್ರ ಪಾಟ್ನಿ ಅವರು ಈ ವಾರದ ಆರಂಭದಲ್ಲಿ ಭದ್ರತಾ ಠೇವಣಿಯನ್ನು ನಾಣ್ಯಗಳ ರೂಪದಲ್ಲಿ ಪಾವತಿಸಿದ್ದಾರೆ.
ಕೊಳಗೇರಿ ನಿವಾಸಿಗಳ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವುದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಮೂರು ವರ್ಷಗಳ ಹಿಂದೆ ನೆಲಸಮಗೊಳಿಸಲಾದ ಗಾಂಧಿನಗರದ ಮಹಾತ್ಮಾ ಮಂದಿರ ಸಮೀಪದ 521 ಗುಡಿಸಲುಗಳಿದ್ದ ಕೊಳಗೇರಿಯ ನಿವಾಸಿಯಾಗಿದ್ದೆ ಎಂದಿದ್ದಾರೆ.
ಸರಕಾರದ ನಿರಾಸಕ್ತಿಯಿಂದ ನೊಂದಿರುವ ಈ ಪ್ರದೇಶದ ಕೊಳಗೇರಿ ನಿವಾಸಿಗಳು ಹಾಗೂ ಇತರ ದಿನಗೂಲಿ ಕಾರ್ಮಿಕರು 1 ರೂ. ನಾಣ್ಯದಲ್ಲಿ 10 ಸಾವಿರ ರೂ. ಸಂಗ್ರಹಿಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಭದ್ರತಾ ಠೇವಣಿಯಾಗಿ ನೀಡಿದರು.
ಮಹೇಂದ್ರ ಪಾಟ್ನಿ, ಪಕ್ಷೇತರ ಅಭ್ಯರ್ಥಿ