ಬ್ರಿಟೀಷರಿಂದ ಸಾವರ್ಕರ್ 60 ರೂ. ಪಿಂಚಣಿ ಪಡೆದದ್ದು ಏಕೆ?: ನಾನಾ ಪಟೋಲೆ ಪ್ರಶ್ನೆ
ಬುಲ್ದಾನಾ (ಮಹಾರಾಷ್ಟ್ರ), ನ. 19: ಸಾವರ್ಕರ್ ಕುರಿತು ನೀಡಿದ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರನ್ನು ಟೀಕಿಸುವವರು ಸಾವರ್ಕರ್ ಅವರು ಬ್ರಿಟೀಷರಿಂದ 60 ರೂ. ಪಿಂಚಣಿಯನ್ನು ಯಾಕೆ ಪಡೆದರು ಎಂಬ ಪ್ರಶ್ನೆ ಬಗ್ಗೆ ಮೊದಲು ವಿವರಣೆ ನೀಡಲಿ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ನ ‘ಭಾರತ್ ಜೋಡೊ ಯಾತ್ರೆ’ ಮಹಾರಾಷ್ಟ್ರ ಪ್ರವೇಶಿಸಿದ ಸಂದರ್ಭ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಾವರ್ಕರ್ ಅವರು ಬ್ರಿಟೀಷರಿಗೆ ನೆರವು ನೀಡಿದ್ದರು. ಭೀತಿಯಿಂದ ಬ್ರಿಟೀಷರಿಗೆ ಪತ್ರ ಬರೆದ ಕ್ಷಮೆ ಕೋರಿದ್ದರು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.
ಮಹಾರಾಷ್ಟ್ರದಲ್ಲಿ ‘ಭಾರತ್ ಜೋಡೊ ಯಾತ್ರೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ಒಂದಾಗಿದ್ದು, ಮತ್ತಷ್ಟು ಶಕ್ತಿ ಬಂದಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷ ಸೈದ್ಧಾಂತಿಕ ಚರ್ಚೆಯನ್ನು ಬಯಸುತ್ತದೆ. ಜನರನ್ನು ಒಗ್ಗೂಡಿಸಲು ಬಯಸುತ್ತದೆ. ಅದು ಅಹಿಂಸೆಯಲ್ಲಿ ನಂಬಿಕೆ ಇರಿಸಿದೆ ಎಂದು ಪಟೋಲೆ ಅವರು ಹೇಳಿದರು.