ತನ್ನ ಮನೆಗೆ ತಾನೇ ಪೆಟ್ರೋಲ್ ಬಾಂಬ್ ಎಸೆದ ಹಿಂದುತ್ವ ಸಂಘಟನೆಯ ನಾಯಕನ ಬಂಧನ
ಕುಂಭಕೋಣಂ: ಪ್ರಚಾರಕ್ಕಾಗಿ ತನ್ನ ಮನೆಗೆ ತಾನೇ ಪೆಟ್ರೋಲ್ ಬಾಂಬ್ ಎಸೆದು ನಾಟಕವಾಡಿದ ಹಿಂದುತ್ವವಾದಿ ಸಂಘಟನೆಯೊಂದರ ನಾಯಕನನ್ನು ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
ತಮಿಳುನಾಡಿನ ತಂಜಾವೂರು (Tamil Nadu’s Thanjavur) ಜಿಲ್ಲೆಯ ಕುಂಭಕೋಣಂ ಬಳಿಯ ಮೆಲಕಾವೇರಿ ಪ್ರದೇಶದಲ್ಲಿ ಹಿಂದೂ ಮುನ್ನಣಿ (Hindu Munnani) ಸಂಘಟನೆಯ ನಾಯಕನೇ ಬಂಧಿತ ಆರೋಪಿ. ಸಂಘಟನೆಯ ಕುಂಭಕೋಣಂ ನಗರ ಕಾರ್ಯದರ್ಶಿಯೂ ಆಗಿರುವ ಪಿ ಸಕ್ಕರೆಪಾಣಿ (38) ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 5.30ರ ಸುಮಾರಿಗೆ ಯಾರೋ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ಹಿಂದೂ ಮುನ್ನಣಿ ಸದಸ್ಯರಿಗೆ ಸಕ್ಕರೆಪಾಣಿ ಮಾಹಿತಿ ನೀಡಿದ ನಂತರ ಕುಂಭಕೋಣಂ (ಪೂರ್ವ) ಪೊಲೀಸ್ ಠಾಣೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಧಾವಿಸಿದ್ದರು.
ತಂಜಾವೂರು ಜಿಲ್ಲಾ ಎಸ್ಪಿ ರವಳಿ ಪ್ರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು. ಇದೇ ವೇಳೆ ಸ್ಥಳದಲ್ಲಿ ಜಮಾಯಿಸಿದ ಹಿಂದೂ ಮುನ್ನಣಿ ಪದಾಧಿಕಾರಿಗಳು ಪೊಲೀಸರು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ತನಿಖೆಯ ಸಂದರ್ಭದಲ್ಲಿ, ಪ್ರತಿ ಬಾರಿಯೂ ಸಕ್ಕರೆಪಾಣಿಯ ಹೇಳಿಕೆಗಳು ವಿಭಿನ್ನವಾಗಿರುವುದನ್ನು ಪೊಲೀಸರು ಕಂಡುಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ, ಪ್ರಚಾರಕ್ಕಾಗಿ ತನ್ನ ಸ್ವಂತ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದೇನೆ ಎಂದು ವ್ಯಕ್ತಿ ಒಪ್ಪಿಕೊಂಡಿದ್ದಾನೆ.
“ಪೆಟ್ರೋಲ್ ಬಾಂಬ್ ಬಾಟಲಿಯಲ್ಲಿ ಬಳಸಿದ ಬಟ್ಟೆಯು ಆತನ ಮನೆಯ ಬೆಡ್ಶೀಟ್ನಂತೆಯೇ ಇತ್ತು. ಬೆಡ್ಶೀಟ್ನಿಂದ ತುಂಡನ್ನು ಹರಿದು ಬಾಟಲಿಯಲ್ಲಿ ಬತ್ತಿಯಾಗಿ ಬಳಸಿದ್ದ. ಅಲ್ಲದೆ, ಪೆಟ್ರೋಲ್ನ ಕೆಲವು ಅವಶೇಷಗಳಿರುವ ಪ್ಲಾಸ್ಟಿಕ್ ಬಾಟಲಿಯನ್ನು ನಾವು ಕಂಡುಕೊಂಡಿದ್ದೇವೆ. ಅವರು ಅದನ್ನು ಹತ್ತಿರದ ಪೆಟ್ರೋಲ್ ಬಂಕ್ನಿಂದ ಖರೀದಿಸಿದ್ದ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 436 (ಮನೆ ಧ್ವಂಸ ಮಾಡುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ) ಸೇರಿದಂತೆ ಐದು ವಿಭಿನ್ನ ಸೆಕ್ಷನ್ಗಳ ಅಡಿಯಲ್ಲಿ ಸಕ್ಕರೆಪಾಣಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಸ್ಫೋಟ ಪ್ರಕರಣಕ್ಕೆ ಪೊಲೀಸ್ ಗುಪ್ತಚರ ವಿಭಾಗದ ವೈಫಲ್ಯ ಕಾರಣ: ಕೆಪಿಸಿಸಿ ವಕ್ತಾರ ವಿನಯರಾಜ್ ಆರೋಪ