ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ: ಎಎಪಿಗೆ ಬೃಹತ್ ಗೆಲುವು, ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ
ಹೊಸದಿಲ್ಲಿ,ಡಿ.7: ತೀವ್ರ ಕುತೂಹಲ ಕೆರಳಿಸಿದ್ದ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಕದನದಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್)ಯು ಬಿಜೆಪಿಯ ಪ್ರಬಲ ಪೈಪೋಟಿಯನ್ನು ಮೂಲೆಗೊತ್ತಿ ಭಾರೀ ಗೆಲುವನ್ನು ಸಾಧಿಸಿದೆ. ತನ್ಮೂಲಕ ಡಿಎಂಸಿಯಲ್ಲಿ ಬಿಜೆಪಿಯ ನಿರಂತರ 15 ವರ್ಷಗಳ ಪಾರುಪತ್ಯಕ್ಕೆ ಅಂತ್ಯ ಹಾಡಿದೆ. ದಿಲ್ಲಿಯಲ್ಲಿ ತನ್ನ ನೆಲೆಯನ್ನು ಇನ್ನಷ್ಟು ಕಳೆದುಕೊಂಡಿರುವ ಕಾಂಗ್ರೆಸ್ ಕೇವಲ ಎಂಟು ವಾರ್ಡ್ಗಳಲ್ಲಿ ಗೆದ್ದಿದೆ.
ಬುಧವಾರ ಬೆಳಿಗ್ಗೆ ಮತ ಎಣಿಕೆ ಆರಂಭಗೊಂಡಿದ್ದು,134 ಸ್ಥಾನಗಳನ್ನು ಗೆದ್ದಿರುವ ಆಪ್ 250 ಸದಸ್ಯಬಲದ ಪಾಲಿಕೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 126 ಸ್ಥಾನಗಳಿಗಿಂತ ಎಂಟು ಹೆಚ್ಚಿನ ಸ್ಥಾನಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದ ಬಿಜೆಪಿ 104 ಸ್ಥಾನಗಳನ್ನು ಗಳಿಸಿದ್ದು,15 ವರ್ಷಗಳ ನಿರಂತರ ಆಡಳಿತದ ಬಳಿಕ ಇದು ಅಷ್ಟೇನೂ ಕಳಪೆ ಸಾಧನೆಯಲ್ಲ.
2017ರ ಎಂಸಿಡಿ ಚುನಾವಣೆಗಳಲ್ಲಿ ಒಟ್ಟು 272 ವಾರ್ಡ್ಗಳ ಪೈಕಿ ಬಿಜೆಪಿ 181 ವಾರ್ಡ್ಗಳಲ್ಲಿ ವಿಜಯ ಪತಾಕೆ ಹಾರಿಸಿದ್ದರೆ ಆಪ್ಗೆ ಕೇವಲ 48 ವಾರ್ಡ್ಗಳು ದಕ್ಕಿದ್ದವು. ಕಾಂಗ್ರೆಸ್ 30 ವಾರ್ಡ್ಗಳನ್ನು ಗೆದ್ದುಕೊಂಡಿತ್ತು.
ಆಪ್ ಕಚೇರಿ ಬೃಹತ್ ಸಂಭ್ರಮಾಚರಣೆಗೆ ಸಾಕ್ಷಿಯಾಗಿತ್ತು. ಅಲ್ಲಿ ಬೆಳಿಗ್ಗೆಯಿಂದಲೇ ಬಲೂನುಗಳು ಮತ್ತು ಗೆಲುವಿನ ಪೋಸ್ಟರ್ಗಳನ್ನು ಸಿದ್ಧವಾಗಿಡಲಾಗಿತ್ತು. ಧೋಲ್ ವಾದನಕ್ಕೆ ನರ್ತಿಸುತ್ತಿದ್ದ ಪಕ್ಷದ ಕಾರ್ಯಕರ್ತರ ಜೊತೆಗೆ ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವೇಷ ಧರಿಸಿದ್ದ ಚಿಣ್ಣರು ಸೇರಿಕೊಂಡಿದ್ದರು.
ಇದು ಆಪ್ ಪಾಲಿಗೆ ಯಾವುದೇ ಚುನಾವಣೆಯಲ್ಲಿ ಬಿಜೆಪಿಯನ್ನು ಪದಚ್ಯುತಗೊಳಿಸಿರುವ ಮೊದಲ ವಿಜಯವಾಗಿದೆ. ಆಪ್ ಕಾಂಗ್ರೆಸ್ನ್ನು ಮಾತ್ರ ಸೋಲಿಸಿದೆ ಎಂದು ಬಿಜೆಪಿ ಸದಾ ಹೇಳಿಕೊಳ್ಳುತ್ತಿತ್ತು,ಇಂದು ಕೇಜ್ರಿವಾಲ್ ಅವರಿಗೆ ಉತ್ತರಿಸಿದ್ದಾರೆ ಎಂದು ಆಪ್ ನಾಯಕ ಸಂಜಯ ಸಿಂಗ್ ಬೆಟ್ಟು ಮಾಡಿದರು.
ಬಿಜೆಪಿ ಕಳೆದ 24 ವರ್ಷಗಳಲ್ಲಿ ದಿಲ್ಲಿ ರಾಜ್ಯ ಸರಕಾರವನ್ನು ರಚಿಸಿಲ್ಲವಾದರೂ ಕಾಂಗ್ರೆಸ್ ಮತ್ತು ಆಪ್ ಸರಕಾರಗಳ ಆಡಳಿತದ ನಡುವೆಯೂ ಎಂಸಿಡಿಯ ಮೇಲೆ ಬಲವಾದ ಹಿಡಿತವನ್ನು ಹೊಂದಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸ್ಥಾನಗಳನ್ನು ಗೆದ್ದು ದಾಖಲೆಯನ್ನು ಸೃಷ್ಟಿಸಿದ್ದರೂ ಎರಡು ವರ್ಷಗಳ ಬಳಿಕ ನಡೆದಿದ್ದ ಎಂಸಿಡಿ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೂಲಕ ದಿಲ್ಲಿಯ ಆಡಳಿತದ ಮೇಲೆ ಭಾಗಶಃ ನಿಯಂತ್ರಣ ಹೊಂದಿರುವ ಆಪ್ ಮತ್ತು ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು. 10 ವರ್ಷಗಳ ಹಿಂದೆ ಪ್ರದೇಶವಾರು ಮೂರು ಪಾಲಿಕೆಗಳಾಗಿ ವಿಭಜಿಸಲ್ಪಟ್ಟಿದ್ದ ಎಂಸಿಡಿ ಮರುಏಕೀಕೃತಗೊಂಡ ಮತ್ತು ಈ ವರ್ಷದ ಆರಂಭದಲ್ಲಿ ಬಿಜೆಪಿಯ ಅಧಿಕಾರಾವಧಿ ಮುಗಿದ ನಂತರ ಕ್ಷೇತ್ರಗಳ ಮರುವಿಂಗಡಣೆಯ ಬಳಿಕ ಇದು ಮೊದಲ ಚುನಾವಣೆಯಾಗಿತ್ತು.