ಕೊಲೀಜಿಯಮ್ ವ್ಯವಸ್ಥೆ ‘ಈ ನೆಲದ ಕಾನೂನು’ ಅದನ್ನು ಸಂಪೂರ್ಣವಾಗಿ ಅನುಸರಿಸಬೇಕು : ಸುಪ್ರೀಂ ಕೋರ್ಟ್
ನ್ಯಾಯಾಧೀಶರ ನೇಮಕಾತಿ ವಿಳಂಬಿಸುತ್ತಿರುವ ಸರಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಲಯ
ಹೊಸದಿಲ್ಲಿ, ಡಿ. 8: ನ್ಯಾಯಾಂಗ ಹುದ್ದೆಗಳ ನೇಮಕಾತಿಗಳನ್ನು ವಿಳಂಬಿಸುತ್ತಿರುವ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಕಟು ಎಚ್ಚರಿಕೆ ನೀಡಿ 10 ದಿನಗಳಾಗುವ ಮೊದಲೇ, ಸುಪ್ರೀಂ ಕೋರ್ಟ್ (Supreme Court)ಗುರುವಾರ, ಉನ್ನತ ನ್ಯಾಯಾಂಗ ಹುದ್ದೆಗಳ ನೇಮಕಾತಿಯಲ್ಲಿ ಅನುಸರಿಸಲಾಗುತ್ತಿರುವ ಕೊಲೀಜಿಯಮ್ ವ್ಯವಸ್ಥೆಯ ವಿರುದ್ಧ ವಾರಕ್ಕೊಮ್ಮೆ ಎಂಬಂತೆ ಕಿಡಿಗಾರುತ್ತಿರುವ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೊಲೀಜಿಯಮ್ ವ್ಯವಸ್ಥೆಯು ‘ಈ ನೆಲದ ಕಾನೂನು’ (Law of this land)ಆಗಿದೆ, ಅದನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಕೊಲೀಜಿಯಮ್ ವ್ಯವಸ್ಥೆಯ ವಿರುದ್ಧ ಸಮಾಜದ ಕೆಲವು ವರ್ಗಗಳು ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ ಮಾತ್ರಕ್ಕೆ, ಅದನ್ನು (Coliseum system) ಈ ನೆಲದ ಕಾನೂನು ಅಲ್ಲ ಎನ್ನುವಂತಿಲ್ಲ ಎಂದು ಭಾರತದ ಸರ್ವೋನ್ನತ ನ್ಯಾಯಾಲಯ ಹೇಳಿತು.
‘‘ಸುಪ್ರೀಂ ಕೋರ್ಟ್ನ ಬಗ್ಗೆ ಸರಕಾರದ ಅಧಿಕಾರಿಗಳು ನೀಡುತ್ತಿರುವ ಹೇಳಿಕೆಗಳು ಸರಿಯಿಲ್ಲ, ನೀವು ಅವರಿಗೆ ಸಲಹೆ ನೀಡಬೇಕು’’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ತಿಳಿಸಿತು. ಸುಪ್ರಿಂ ಕೋರ್ಟ್ ಘೋಷಿಸುವ ಯಾವುದೇ ಕಾನೂನು ಸಂಬಂಧಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ ಎಂದು ಅದು ಹೇಳಿತು.
ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿತು.
ಉನ್ನತ ನ್ಯಾಯಾಂಗದ ಹುದ್ದೆಗಳ ನೇಮಕಾತಿಯಲ್ಲಿ ಸರಕಾರ ಅನುಸರಿಸುತ್ತಿರುವ ವಿಳಂಬವನ್ನು ಸುಪ್ರೀಂ ಕೋರ್ಟ್ ನವೆಂಬರ್ 28ರಂದು ಪ್ರಶ್ನಿಸಿತ್ತು. ಸರಕಾರವು ‘‘ಹಿಂದಿರುಗಲು ಸಾಧ್ಯವಾಗದಷ್ಟು ದೂರ’’ವನ್ನು ಕ್ರಮಿಸಿದೆ ಎಂದು ಅದು ಹೇಳಿತ್ತು. ‘‘ಕಾನೂನು ಇರುವವರೆಗೆ ಅದನ್ನು ಅನುಸರಿಸಬೇಕು. ಈ ವಿಷಯದಲ್ಲಿ ನಾವು ನ್ಯಾಯಾಂಗ ನಿರ್ಧಾರವನ್ನು ತೆಗೆದುಕೊಳ್ಳುವ ಅನಿವಾರ್ಯತೆಗೆ ನಮ್ಮನ್ನು ಒಳಪಡಿಸಬಾರದು’’ ಎಂದು ನ್ಯಾಯಾಲಯ ಎಚ್ಚರಿಸಿತ್ತು.
ಕೊಲೀಜಿಯಮ್ ವ್ಯವಸ್ಥೆಯು ಸಂವಿಧಾನಕ್ಕೆ ‘‘ಅಪರಿಚಿತ’’ ಎಂಬ ಕಾನೂನು ಸಚಿವ ಕಿರಣ್ ರಿಜೀಜು ಅವರ ಇತ್ತೀಚಿನ ಹೇಳಿಕೆಗೂ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿದೆ. ‘‘ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಅದನ್ನು ಹೇಳಿದ್ದಾರೆ. ಅವರು ಹಾಗೆ ಹೇಳಬಾರದಾಗಿತ್ತು’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರಕಾರವು ತನ್ನ ಆಕ್ಷೇಪಗಳನ್ನು ತಿಳಿಸದೆ ನ್ಯಾಯಾಧೀಶರ ಹೆಸರುಗಳನ್ನು ತಡೆಹಿಡಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ‘‘ಕೊಲೀಜಿಯಮ್ ಒಮ್ಮೆ ಒಂದು ಹೆಸರನ್ನು ಪುನರುಚ್ಚರಿಸಿದರೆ ಅದು ಅಂತಿಮ. ಹೆಸರುಗಳನ್ನು ಹೀಗೆ ತಡೆಹಿಡಿಯುವ ಮೂಲಕ ಸರಕಾರವು ತಿರುಗಿ ಬಾರಲು ಸಾಧ್ಯವಾಗದಷ್ಟು ದೂರಕ್ಕೆ ಹೋಗಿದೆ’’ ಎಂದು ಸರ್ವೋನ್ನತ ನ್ಯಾಯಾಲಯ ಹೇಳಿದೆ.
‘‘ಕಾನೂನೊಂದನ್ನು ರೂಪಿಸುವ ಹಕ್ಕು ಸಂಸತ್ತಿಗಿದೆ, ಆದರೆ ಅದನ್ನು ಪರಾಮರ್ಶೆಗೆ ಒಳಪಡಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ. ಈ ನ್ಯಾಯಾಲಯ ವಿಧಿಸಿದ ಕಾನೂನನ್ನು ಎಲ್ಲರೂ ಅನುಸರಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಜನರು ತಮಗೆ ಸರಿಯೆಂದು ಕಂಡ ಕಾನೂನನ್ನು ಅನುಸರಿಸುತ್ತಾರೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಅಟಾರ್ನಿ ಜನರಲ್ ಸರಕಾರದೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.