ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಅಧಿಕಾರಕ್ಕೆ ಮರಳುವಲ್ಲಿ ನೆರವಾದ ಐದು ಪ್ರಮುಖ ಅಂಶಗಳು
ಹೊಸದಿಲ್ಲಿ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಗುರುವಾರ ಪ್ರಕಟವಾಗಿದ್ದು,ತನ್ನ ನಾಲ್ಕು ದಶಕಗಳಷ್ಟು ಹಳೆಯ ಸಂಪ್ರದಾಯವನ್ನು ಬಿಡದ ರಾಜ್ಯವು ಆಡಳಿತಾರೂಢ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್(Congress) ಪಕ್ಷವನ್ನು ಮತ್ತೆ ಅಧಿಕಾರದ ಗದ್ದುಗೆಗೇರಿಸಿದೆ.
ಆಡಳಿತ ವಿರೋಧಿ ಅಲೆ ಮತ್ತು ಬಂಡಾಯ
ಕಳೆದ 37 ವರ್ಷಗಳಲ್ಲಿ ಹಿಮಾಚಲ ಪ್ರದೇಶವು ಪ್ರತಿ ಐದು ವರ್ಷಗಳಿಗೊಮ್ಮೆ ಸರಕಾರವನ್ನು ಬದಲಿಸುವ ತನ್ನ ಸಂಪ್ರದಾಯದಿಂದ ಎಂದೂ ಹಿಂದೆ ಸರಿದಿಲ್ಲ. ಮುಖ್ಯಮಂತ್ರಿ ಜೈರಾಮ ಠಾಕೂರ್ (Jairam Thakur)ನೇತೃತ್ವದ ಸರಕಾರವು ‘ರಾಜ್ ನಹೀ,ರಿವಾಜ್ ಬದಲೇಗಾ’ ಕರೆಯೊಂದಿಗೆ ಈ ಸಂಪ್ರದಾಯಕ್ಕೆ ಮಂಗಳ ಹಾಡಲು ಪಣ ತೊಟ್ಟಿತ್ತಾದರೂ ಮತದಾರರು ಬೇರೆಯೇ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಟಿಕೆಟ್ ವಿತರಣೆಯೂ ಬಿಜೆಪಿಗೆ ಮುಳುವಾಗಿ ಪರಿಣಮಿಸಿದ್ದು,ರಾಜ್ಯಾದ್ಯಂತ 21 ನಾಯಕರು ಪಕ್ಷದ ವಿರುದ್ಧ ಬಂಡೆದಿದ್ದರು. ಅವರನ್ನು ಸಮಾಧಾನಿಸಲು ಬಿಜೆಪಿ ಎಲ್ಲ ಪರಿಶ್ರಮವನ್ನು ಹಾಕಿತ್ತಾದರೂ ಅವರಲ್ಲಿ ಹಲವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ರಾಜ್ಯದಲ್ಲಿ ಪಕ್ಷದ ಮತಗಳ ವಿಭಜನೆಗೆ ಕಾರಣರಾಗಿದ್ದಾರೆ.
ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆ ಭರವಸೆ
2.5 ಲ.ಕ್ಕೂ ಅಧಿಕ ಸರಕಾರಿ ಉದ್ಯೋಗಿಗಳಿರುವ ರಾಜ್ಯದಲ್ಲಿ ಚುನಾವಣೆಯುದ್ದಕ್ಕೂ ಹಳೆಯ ಪಿಂಚಣಿ ಯೋಜನೆ (OPS)ಯು ಸಾಕಷ್ಟು ಸದ್ದು ಮಾಡಿತ್ತು. ಹಳೆಯ ಪದ್ಧತಿಯನ್ನೇ ಜಾರಿಗೊಳಿಸುವ ಭರವಸೆಯೊಂದಿಗೆ ಸರಕಾರಿ ಉದ್ಯೋಗಿಗಳನ್ನು ಓಲೈಸುವ ಪ್ರಯತ್ನವನ್ನು ಉಭಯ ಪಕ್ಷಗಳು ಮಾಡಿದ್ದವಾದರೂ ಮತದಾರರು ಕಾಂಗ್ರೆಸ್ಗೇ ಮಣೆ ಹಾಕಿದ್ದಾರೆ.
ನಿರುದ್ಯೋಗ ಮತ್ತು ಅಗ್ನಿವೀರ್ ವಿರುದ್ಧ ಆಕ್ರೋಶ
ಕಳೆದ ವರ್ಷ ನಿಧನರಾದ ರಾಜ್ಯದ ದಿಗ್ಗಜ ನಾಯಕ ವೀರಭದ್ರಸಿಂಗ್ ಅವರ ಅನುಪಸ್ಥಿತಿಯಲ್ಲಿ ಎಚ್ಚರಿಕೆ ವಹಿಸಿದ್ದ ಕಾಂಗ್ರೆಸ್ ರಾಷ್ಟ್ರೀಯ ವಿಷಯಗಳಿಗಿಂತ ಸ್ಥಳೀಯ ಸಮಸ್ಯೆಗಳನ್ನು ಕೈಗತ್ತಿಕೊಂಡು ಜನರ ಬಳಿ ತೆರಳುವುದನ್ನು ಆಯ್ಕೆ ಮಾಡಿಕೊಂಡಿತ್ತು. ಹಣದುಬ್ಬರ ಮತ್ತು ಹೆಚ್ಚಿದ ನಿರುದ್ಯೋಗದ ವಿರುದ್ಧದ ಸಾರ್ವಜನಿಕ ಅಸಮಾಧಾನವನ್ನು ಕಾಂಗ್ರೆಸ್ ಸರಿಯಾಗಿಯೇ ಬಳಸಿಕೊಂಡಿತ್ತು. ಹಿಮಾಚಲ ಪ್ರದೇಶವು ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನೀಡುತ್ತಿದ್ದು,ಹೆಚ್ಚಿನ ಜನರು ಕೇಂದ್ರದ ಅಗ್ನಿವೀರ್ ಯೋಜನೆಯ ಬಗ್ಗೆ ಒಲವು ಹೊಂದಿಲ್ಲ.
ಇದು ಕಾಂಗ್ರೆಸ್ಗೆ ಲಾಭವನ್ನುಂಟು ಮಾಡಿರುವಂತಿದೆ. ಕಾಂಗ್ರಾದಲ್ಲಿ ತನ್ನ ಬೃಹತ್ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ,2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುವ ಭರವಸೆ ನೀಡಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ವರ್ಷದಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಮತ್ತು ಸ್ವೋದ್ಯೋಗಗಳಿಗೆ ಆರ್ಥಿಕ ನೆರವು ಒದಗಿಸುವುದಾಗಿಯೂ ಕಾಂಗ್ರೆಸ್ ಭರವಸೆ ನೀಡಿತ್ತು.
ಸೇಬು ಬೆಳೆಗಾರರಲ್ಲಿಯ ಅತೃಪ್ತಿ
(Photo: PTI)
ಒಟ್ಟು 67 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ತಮ್ಮ ಉಪಸ್ಥಿತಿಯಿಂದಾಗಿ ಸೇಬು ಬೆಳೆಗಾರರು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಹಿಡಿತವನ್ನು ಹೊಂದಿದ್ದಾರೆ. ಆದರೆ ಈ ವರ್ಷ ಲಾಭದಲ್ಲಿ ಕುಸಿತ,ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಬೆಲೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಖಾಸಗಿ ಕಂಪನಿಗಳಿಂದಾಗಿ ಬೆಳೆಗಾರರು ತೀವ್ರ ಅಸಮಾಧಾನಗೊಂಡಿದ್ದರು. ಇದರ ಜೊತೆಗೆ ಇತ್ತೀಚಿಗೆ ಪ್ಯಾಕ್ ಮಾಡಲಾದ ಸರಕುಗಳ ಮೇಲೆ ಜಿಎಸ್ಟಿ ಹೇರಿಕೆಯೂ ಅವರಿಗೆ ಬಲವಾದ ಹೊಡೆತ ನೀಡಿದೆ. ಇವೆಲ್ಲವೂ ಅಧಿಕಾರದಲ್ಲಿ ಮತ್ತೆ ಮುಂದುವರಿಯಬೇಕು ಎಂಬ ಬಿಜೆಪಿ ಆಸೆಗೆ ತಣ್ಣೀರೆರಚಿವೆ.
ಕಾಂಗ್ರೆಸ್ ಸೇಬಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು.
ಪ್ರಿಯಾಂಕಾ ಗಾಂಧಿ ಯಶಸ್ವಿ ಪ್ರಚಾರ
(Photo: PTI)
ಹಿಮಾಚಲ ಪ್ರದೇಶದಲ್ಲಿಯ ವಿಜಯವು ರಾಜ್ಯದಲ್ಲಿ ಪಕ್ಷದ ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಮೊದಲ ಗೆಲುವೂ ಆಗಿದೆ. ರಾಜ್ಯಾದ್ಯಂತ ಸುಮಾರು 10 ರ್ಯಾಲಿಗಳಲ್ಲಿ ಮಾತನಾಡಿದ್ದ ಅವರು ಮಹಿಳಾ ಮತದಾರರೊಂದಿಗೆ ನಿಕಟ ಸಂಪರ್ಕ ಸಾಧಿಸಿದ್ದೂ ಪಕ್ಷಕ್ಕೆ ನೆರವಾಗಿದೆ. ಶೇ.48ರಷ್ಟಿರುವ ಮಹಿಳಾ ಮತದಾರರು ರಾಜ್ಯದ ಚುನಾವಣೆಗಳಲ್ಲಿ ಸ್ಪಷ್ಟ ಪಾತ್ರವನ್ನು ಹೊಂದಿದ್ದಾರೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ಮಹಿಳೆಯರು ಈ ಸಲ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ( ಪುರುಷರಿಗಿಂತ ಶೇ.4.5 ಅಧಿಕ). 18ರಿಂದ 60 ವರ್ಷ ವಯೋಮಾನದ ಎಲ್ಲ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ಪ್ರೋತ್ಸಾಹ ಧನದ ಭರವಸೆಯನ್ನೂ ಕಾಂಗ್ರೆಸ್ ನೀಡಿತ್ತು.