ರಾಜ್ಯಪಾಲರನ್ನು ವಿವಿ ಕುಲಪತಿ ಹುದ್ದೆಯಿಂದ ತಗೆದುಹಾಕುವ ಮಸೂದೆಗೆ ಕೇರಳ ವಿಧಾನಸಭೆಯ ಅನುಮೋದನೆ
ತಿರುವನಂತಪುರಂ: ಕೇರಳದ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು (governor) ತೆಗದುಹಾಕಿ ಅವರ ಸ್ಥಾನಕ್ಕೆ ಖ್ಯಾತ ಶಿಕ್ಷಣ ತಜ್ಞರನ್ನು ನೇಮಕಗೊಳಿಸಲು ಅನುವು ಮಾಡಿಕೊಡುವ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆಗೆ ಕೇರಳ ವಿಧಾನಸಭೆ (Kerala assembly) ಇಂದು ಅನುಮೋದನೆ ನೀಡಿದೆ. ಆದರೆ ಈ ಮಸೂದೆ ಕುರಿತಂತೆ ತಮ್ಮ ಸಲಹೆಗಳನ್ನು ಸೇರ್ಪಡೆಗೊಳಿಸದೇ ಇರುವುದನ್ನು ವಿರೋಧಿಸಿ ವಿರೋಧಪಕ್ಷಗಳು ಇಂದು ಸದನದಿಂದ ಹೊರನಡೆದಿವೆ.
ಈ ಮಸೂದೆ ಕುರಿತು ಸದನದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಈ ಸಂದರ್ಭ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೇತೃತ್ವದ-ಯುಡಿಎಫ್ (UDF) ಶಾಸಕರು, ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕುವುದಕ್ಕೆ ವಿರೋಧವಿಲ್ಲವಾದರೂ ಕುಲಪತಿಗಳನ್ನಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ಹಾಗೂ ಕೇರಳ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಬೇಕು ಎಂದು ಸಲಹೆ ನೀಡಿದೆ. ಪ್ರತಿ ವಿವಿಗೆ ಪ್ರತ್ಯೇಕ ಕುಲಪತಿ ಇರಬೇಕೆಂದೇನಿಲ್ಲ, ಈ ಹುದ್ದೆಗೆ ಆಯ್ಕೆಮಾಡುವ ಸಮಿತಿಯಲ್ಲಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿರಬೇಕೆಂದು ಪಕ್ಷ ಹೇಳಿದೆ.
ಆದರೆ ಆಯ್ಕೆ ಸಮಿತಿಯಲ್ಲಿ ನ್ಯಾಯಾಧೀಶರ ಬದಲು ಸ್ಪೀಕರ್ ಇರುವುದು ಉತ್ತಮ ಎಂದು ಕಾನೂನು ಸಚಿವ ಪಿ ರಾಜೀವ್ ಹೇಳಿದರಲ್ಲದೆ ವಿವಿ ಕುಲಪತಿಗಳ ಹುದ್ದೆಗೆ ನಿವೃತ್ತ ನ್ಯಾಯಾಧೀಶರುಗಳನ್ನು ಮಾತ್ರ ಪರಿಗಣಿಸುವಂತಿಲ್ಲ ಎಂದೂ ಹೇಳಿದರು.
ತನ್ನ ಸಲಹೆಗಳಿಗೆ ಸರಕಾರ ಒಪ್ಪದೇ ಇರುವುದನ್ನು ವಿರೋಧಿಸಿ ಯುಡಿಎಫ್ ಸಭಾತ್ಯಾಗ ನಡೆಸಿದೆ.
ವಿವಿಗಳಿಗೆ ಉಪಕುಲಪತಿಗಳ ನೇಮಕಾತಿ ಕುರಿತಂತೆ ಸರಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿಯ ಹಿನ್ನೆಲೆಯಲ್ಲಿ ಈ ವಿವಿ ಕಾನೂನುಗಳ (ತಿದ್ದುಪಡಿ)ಮಸೂದೆ ಮಂಡಿಸಲಾಗಿತ್ತು.
ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರೂ. 10,09,511 ಕೋಟಿಗಳ ವಸೂಲಾಗದ ಸಾಲ ರೈಟ್-ಆಫ್ ಮಾಡಿದ ಬ್ಯಾಂಕ್ ಗಳು: ವಿತ್ತ ಸಚಿವೆ