ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸುವ ಪ್ರಸ್ತಾಪವಿಲ್ಲ ಎಂದ ಕೇಂದ್ರ
ಹೊಸದಿಲ್ಲಿ: ದೇಶದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (old pension scheme) ಮರುಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ವಿತ್ತ ರಾಜ್ಯ ಸಚಿವ ಭಗವತ್ ಕರಾಡ್ (Bhagwat Karad) ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.
ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ (Asaduddin Owaisi) ಅವರು ಹಳೆಯ ಪಿಂಚಣಿ ಯೋಜನೆ ಕುರಿತ ಸರಕಾರದ ನಿಲುವನ್ನು ತಿಳಿಯಬೇಕೆಂದು ಕೋರಿ ಸಲ್ಲಿಸಿದ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು. ಹೊಸ ಪಿಂಚಣಿ ಯೋಜನೆ ದೇಶದಲ್ಲಿ ಎಪ್ರಿಲ್ 1, 2003 ರಂದು ಜಾರಿಗೆ ಬಂದಿತ್ತು.
ರಾಜಸ್ಥಾನ, ಛತ್ತೀಸಗಢ ಮತ್ತು ಜಾರ್ಖಂಡ್ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನೇ ತಮ್ಮ ಉದ್ಯೋಗಿಗಳಿಗೆ ಒದಗಿಸುವುದಾಗಿ ಕೇಂದ್ರಕ್ಕೆ ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸಿವೆ ಎಂದು ಸಚಿವರು ಹೇಳಿದರು. ಪಂಜಾಬ್ನ ಆಪ್ ಸರ್ಕಾರಕೂಡ ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಿದೆ ಎಂದೂ ಅವರು ತಿಳಿಸಿದರು.
ಆದರೆ ನ್ಯಾಷನಲ್ ಪೆನ್ಶನ್ ಸಿಸ್ಟಂ ಅಡಿ ಉದ್ಯೋಗಿಗಳು ಮತ್ತು ಸರ್ಕಾರ ಹೂಡಿರುವ ಮೊತ್ತವನ್ನು ಮರಳಿ ರಾಜ್ಯ ಸರ್ಕಾರಗಳಿಗೆ ನೀಡಲು ಪ್ರಾಧಿಕಾರದ ನಿಯಮದಂತೆ ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಜಾಮೀನು ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಬೇಡಿ: ಉಮರ್ ಖಾಲಿದ್ಗೆ ದಿಲ್ಲಿ ಕೋರ್ಟ್ ಷರತ್ತು