ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್, ಮೌಲನಾ ಅಝಾದ್ ಫೆಲೋಶಿಪ್ ಮರು ಆರಂಭಿಸಲು ಲೋಕಸಭೆಯಲ್ಲಿ ಆಗ್ರಹ
ಹೊಸದಿಲ್ಲಿ, ಡಿ. 13: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಹಾಗೂ ಮೌಲನಾ ಅಝಾದ್ ಫೆಲೋಶಿಪ್(Maulana Azad Fellowship) ಅನ್ನು ಮರು ಆರಂಭಿಸುವಂತೆ ಹಲವು ಸಂಸದರು ಲೋಕಸಭೆಯಲ್ಲಿ ಮಂಗಳವಾರ ಆಗ್ರಹಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಹಿಂದುಳಿದರೆ ದೇಶ ಪ್ರಗತಿಯಾಗುವುದು ಹೇಗೆ ? ಎಂದು ಅವರು ಪ್ರಶ್ನಿಸಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೌಲನಾ ಅಝಾದ್ ಫೆಲೋಶಿಪ್ ರದ್ದುಗೊಳಿಸಲಾಗಿದೆ.
ಸರಕಾರದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಫ್ ಇನ್ನು ಮುಂದೆ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಸ್ಕಾಲರ್ಶಿಫ್ ಹಾಗೂ ಫೆಲೋಶಿಪ್ ಅನ್ನು ಮರು ಆರಂಭಿಸುವಂತೆ ಹಲವು ಸಂಸದರು ಆಗ್ರಹಿಸಿದರು. ಚರ್ಚೆಯ ಸಂದರ್ಭ ಅನುದಾನ ನೀಡುವ ಪೂರಕ ಬೇಡಿಕೆಯನ್ನು ಕೂಡ ಸಂಸದರು ಮುಂದಿಟ್ಟರು. ಬಿಎಸ್ಪಿ ಸಂಸದ ದಾನಿಶ್ ಅಲಿ(Danish Ali) ಅವರು, ಮೆಟ್ರಿಕ್ ಪೂರ್ವ ಸ್ಕಾಲರ್ಶಿಫ್ ಹಾಗೂ ಮೌಲನಾ ಅಝಾದ್ ಫೆಲೋಶಿಪ್ ಮರು ಆರಂಭಿಸುವಂತೆ ಆಗ್ರಹಿಸಿದರು.
‘‘ದೇಶದ ಏಳಿಗೆಗೆ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅಲ್ಪಸಂಖ್ಯಾತರನ್ನು ಬಿಟ್ಟು ಏಳಿಗೆ ಸಾಧಿಸುವುದು ಹೇಗೆ? ಶಿಷ್ಯ ವೇತನ ನಿಲ್ಲಿಸಿದರೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಓದುವುದು ಹೇಗೆ?’’ ಎಂದು ಎಐಎಂಐಎಂನ ಸಂಸದ ಸಯ್ಯದ್ ಇಮ್ತಿಯಾಝ್ ಜಲೀಲ್ ಪ್ರಶ್ನಿಸಿದರು. ಅಲ್ಪಸಂಖ್ಯಾತರ ಶಿಕ್ಷಣದ ವಿಷಯ ಎತ್ತಿದ ಸಮಾಜವಾದಿ ಪಕ್ಷದ ಸದಸ್ಯ ಎಸ್.ಟಿ. ಹಸನ್, ಮೌಲನಾ ಆಝಾದ್ ನ್ಯಾಷನಲ್ ಫೆಲೋಶಿಪ್ನಂತೆ ಸ್ಕಾಲರ್ಶಿಪ್ ಅನ್ನು ಕೂಡ ಮರು ಆರಂಭಿಸಬೇಕು ಎಂದರು.