ಮಹಾರಾಷ್ಟ್ರ: ಬಹದೂರ್ ಶಾಹ್ ಝಫರ್ ಭಾವಚಿತ್ರ ಒಡೆದು ಹಾಕಿದ ಸಂಘ ಪರಿವಾರ
ಪುಣೆ, ಡಿ. 16: ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿರುವ ಬಿರಿಯಾಣಿ ಮಳಿಗೆಯೊಂದರ ಗೋಡೆಯಲ್ಲಿ ತೂಗು ಹಾಕಲಾಗಿದ್ದ ಕೊನೆಯ ಮೊಗಲ್ ದೊರೆ ಔರಂಗಜೇಬನ ವಂಶಸ್ಥನದ್ದು ಎಂದು ಹೇಳುವ ಬಹದೂರ್ ಶಾಹ್ ಝಫರ್ ಅವರ ಭಾವಚಿತ್ರವನ್ನು ಸಂಘ ಪರಿವಾರ ಒಡೆದು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಈ ಘಟನೆಯ ಕುರಿತು ಯಾರೊಬ್ಬರೂ ದೂರು ದಾಖಲಿಸಿಲ್ಲ ಎಂದು ಕೊಲ್ಹಾಪುರದ ರಾಜಾರಾಮ್ಪುರಿ ಪೊಲೀಸ್ ಠಾಣೆಯ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
‘‘ಸಂಘ ಪರಿವಾರಕ್ಕೆ ಸೇರಿದ ಕೆಲವು ಯುವಕರು ಬಿರಿಯಾನಿ ಮಳಿಗೆಗೆ ಆಗಮಿಸಿದರು. ಅಲ್ಲಿ ಬಹದೂರ್ ಶಾಹ್ ಝಫರ್ ಅವರ ಭಾವಚಿತ್ರ ನೋಡಿದರು. ಔರಂಗಜೇಬನ ವಂಶಸ್ಥರ ಭಾವಚಿತ್ರವನ್ನು ಗೋಡೆಯಲ್ಲಿ ನೇತು ಹಾಕಿರುವುದು ಏಕೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಹಾಗೂ ಭಾವಚಿತ್ರ ತೆಗೆಯುವಂತೆ ಮಳಿಗೆಯ ಸಿಬ್ಬಂದಿಗೆ ಸೂಚಿಸಿದ್ದರು’’ ಎಂದು ಅವರು ತಿಳಿಸಿದ್ದಾರೆ.
‘‘ಸಿಬ್ಬಂದಿ ಒಪ್ಪಿಕೊಂಡಿದ್ದರು. ಆದರೆ, ಭಾವಚಿತ್ರ ತೆಗೆಯಲಿಲ್ಲ. ಗುಂಪು ಬುಧವಾರ ರಾತ್ರಿ ಮತ್ತೆ ಅದೇ ಮಳಿಗೆಗೆ ಭೇಟಿ ನೀಡಿತು ಹಾಗೂ ಭಾವಚಿತ್ರವನ್ನು ತೆಗೆದು ಒಡೆದು ಹಾಕಿತು’’ ಎಂದು ಪೊಲೀಸರು ತಿಳಿಸಿದ್ದಾರೆ.
ಬಹದೂರ್ ಶಾಹ್ ಝಫರ್ 20ನೇ ಹಾಗೂ ಕೊನೆಯ ಮೊಗಲ್ ದೊರೆ. ಅವರು ಉರ್ದು ಕವಿ ಕೂಡ ಆಗಿದ್ದರು.