ಉ.ಪ್ರ: ಅಂಗವಿಕಲ ಬಾಲಕಿಯ ಅತ್ಯಾಚಾರ: ಪ್ರಕರಣ ಮುಚ್ಚಿಟ್ಟಿದ್ದ ಮೂವರು ಪೊಲೀಸರ ಅಮಾನತು
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ 13ರ ಹರೆಯದ ಅಂಗವಿಕಲ ಬಾಲಕಿಯ ಅತ್ಯಾಚಾರ ಘಟನೆಯನ್ನು ಮುಚ್ಚಿಟ್ಟಿದ್ದಕ್ಕಾಗಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರು ತಿಳಿಸಿರುವಂತೆ ಶೀಷಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನ.24 ರಂದು ಘಟನೆಯು ನಡೆದಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರಾಮಾವತಾರ ಸಿಂಗ್ ಮತ್ತು ನರೇಶ ಪಾಲ್ ಹಾಗೂ ಸಬ್-ಇನ್ಸ್ಪೆಕ್ಟರ್ ಆರೋಪಿ ಚಂದ್ರಪಾಲ್ ನಿಂದ ಲಂಚವನ್ನು ಪಡೆದಿದ್ದರು ಮತ್ತು ಅತ್ಯಾಚಾರದ ಬದಲು ಲೈಂಗಿಕ ಕಿರುಕುಳದ ಎಫ್ಐಆರ್ ದಾಖಲಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಸಿಬ್ಬಂದಿಗಳು ಪೊಲೀಸ್ ಹೊರಠಾಣೆಯೊಂದರಲ್ಲಿ ತನ್ನ ಬಟ್ಟೆಗಳನ್ನು ಬದಲಿಸಿದ್ದರು ಮತ್ತು ಲೈಂಗಿಕ ದೌರ್ಜನ್ಯ ನಡೆದಾಗ ತಾನು ಧರಿಸಿದ್ದ ಬಟ್ಟೆಗಳನ್ನು ಬಿಸಾಡಿದ್ದರು ಎಂದೂ ಸಂತ್ರಸ್ತ ಬಾಲಕಿ ದೂರಿನಲ್ಲಿ ಆಪಾದಿಸಿದ್ದಾಳೆ.
ಆರೋಪಿ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿತ್ತು ಮತ್ತು ಆರೋಪಗಳು ನಿಜ ಎನ್ನುವುದು ಕಂಡುಬಂದಿದೆ. ಅವರನ್ನು ಅಮಾನತುಗೊಳಿಸಲಾಗಿದ್ದು,ಎಫ್ಐಆರ್ನಲ್ಲಿ ಅತ್ಯಾಚಾರದ ಕಲಮ್ನ್ನು ಸೇರಿಸಲಾಗುವುದು ಎಂದು ಎಸ್ಪಿ(ಗ್ರಾ) ರಾಜಕುಮಾರ ಅಗರವಾಲ್ ಅವರು ಸುದ್ದಿಗಾರರಿಗೆ ತಿಳಿಸಿದರು.