ಪಠಾಣ್ ವಿವಾದ: ಶಾರುಖ್ ಖಾನ್ರನ್ನು ಭೇಟಿಯಾದರೆ ಜೀವಂತ ಸುಡುತ್ತೇನೆ ಎಂದ ಅಯೋಧ್ಯೆ ಸಂತ ಪರಮಹಂಸ್ ಆಚಾರ್ಯ
ಹೊಸದಿಲ್ಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ́ಪಠಾಣ್́ ಚಿತ್ರದ ಬೇಷರಮ್ ರಂಗ್ ಹಾಡಿನ ವಿವಾದದ ಕುರಿತಂತೆ ಪ್ರತಿಕ್ರಿಯಿಸಿರುವ ಅಯ್ಯೋಧ್ಯೆಯ ಸಂತ ಪರಮಹಂಸ್ ಆಚಾರ್ಯ, ತಾವು ಶಾರುಖ್ ಖಾನ್ ಅವರನ್ನು ಎಂದಾದರೂ ಭೇಟಿಯಾದರೆ ಅವರನ್ನು ಜೀವಂತ ಸುಡುವುದಾಗಿ ಹೇಳಿದ್ದಾರೆ. ಆಚಾರ್ಯ ಅವರ ಈ ಹೇಳಿಕೆಯ ವೀಡಿಯೋ ಈಗ ವೈರಲ್ ಆಗಿದೆ.
"ಇಂದು ನಾವು ಅವರ ಪೋಸ್ಟರ್ಗಳನ್ನು ಸುಟ್ಟಿದ್ದೇವೆ. ಪಠಾಣ್ ಚಿತ್ರ ಕೇಸರಿ ಬಣ್ಣವನ್ನು ಅವಮಾನಿಸಿದೆ. ಜಿಹಾದಿ ಶಾರುಖ್ ಖಾನ್ ನನ್ನ ಕಣ್ಣಿಗೆ ಎಲ್ಲಾದರೂ ಬಿದ್ದರೆ ಆತನನ್ನು ಜೀವಂತ ಸುಡುತ್ತೇನೆ," ಎಂದು ಆಚಾರ್ಯ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.
ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸದೇ ಇದ್ದರೆ ಜಲ ಸಮಾಧಿ ಕೈಗೊಳ್ಳುವುದಾಗಿ ಈ ಹಿಂದೆ ಹೇಳಿ ಸುದ್ದಿಯಾಗಿದ್ದ ಪರಮಹಂಸ್ ಆಚಾರ್ಯ, ನಂತರ ತಮ್ಮ ಜಲ ಸಮಾಧಿ ತೀರ್ಮಾನದಿಂದ ಹಿಂದೆ ಸರಿದಿದ್ದರು.
ಪಠಾಣ್ ವಿವಾದ ಕುರಿತಂತೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಹನುಮಾನ್ ಗರ್ಹಿ ಅರ್ಚಕ ಮಹಂತ್ ರಾಜು ದಾಸ್, ಪಠಾಣ್ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಬೇಕೆಂದು ಹೇಳಿ ಸುದ್ದಿಯಾಗಿದ್ದರು.