ಆದರ್ಶ ಸಮಾಜದಲ್ಲಿ ಮಹಿಳೆಯರು ಯಾವುದೇ ಸಮಯದಲ್ಲಿ ಹೊರಗೆ ಹೋಗುವಂತಾಗಬೇಕು: ಕೇರಳ ಹೈಕೋರ್ಟ್
ತಿರುವನಂತಪುರ, ಡಿ. 23: ಆದರ್ಶ ಸಮಾಜದಲ್ಲಿ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಬೀದಿಯಲ್ಲಿ ನಡೆಯುವಂತಾಗಬೇಕು ಎಂದು ಕೇರಳ ಉಚ್ಚ ನ್ಯಾಯಾಲಯ(Kerala High Court) ಗುರುವಾರ ಹೇಳಿದೆ.
ಆದರೆ, ಇದು ಅಸ್ತಿತ್ವಕ್ಕೆ ಬರಬೇಕಾದರೆ, ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಅದು ತಿಳಿಸಿದೆ.
ಹಾಸ್ಟೆಲ್ನಿಂದ ರಾತ್ರಿ 9.30ರ ಬಳಿಕ ತೆರಳುವುದಕ್ಕೆ ನಿರ್ಬಂಧ ವಿಧಿಸಿ ಉನ್ನತ ಶಿಕ್ಷಣ ಇಲಾಖೆ ನೀಡಿದ ನಿರ್ದೇಶನವನ್ನು ಪ್ರಶ್ನಿಸಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು. ಈ ನಿರ್ದೇಶನ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂದು ದೂರುದಾರರು ಹೇಳಿದ್ದಾರೆ.
‘‘ಬಾಲಕರಿಗಿಂತ ಬಾಲಕಿಯರಿಗೆ ಹೆಚ್ಚು ಸಾಂವಿಧಾನಿಕ ಹಕ್ಕುಗಳಿವೆ. ಈ ರೀತಿ ತಾರತಮ್ಯದ ನಿರ್ಬಂಧಗಳನ್ನು ಅವರ ಮೇಲೆ ಹೇರಲು ಸಾಧ್ಯವಿಲ್ಲ. ಹಾಸ್ಟೆಲ್ ಕಾರಾಗೃಹವಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಸರಿಯಾದ ಕಾರಣಕ್ಕೆ ವಿದ್ಯಾರ್ಥಿನಿಯರು ನಿಗದಿತ ಸಮಯದ ನಂತರ ಹಾಸ್ಟೆಲ್ನಿಂದ ತೆರಳಲು ಬಯಸಿದರೆ ಅವರಿಗೆ ನಿರ್ಬಂಧ ವಿಧಿಸಬಾರದು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ (Devan Ramachandran)ಅಭಿಪ್ರಾಯಿಸಿದರು.