ಶಾಲೆಯಲ್ಲಿ ಅಸ್ವಸ್ಥರಾದ ವಿದ್ಯಾರ್ಥಿನಿಯರಿಗೆ 'ಮಾಂತ್ರಿಕ'ನಿಂದ ಚಿಕಿತ್ಸೆ: ಉತ್ತರಪ್ರದೇಶ ಸರಕಾರಕ್ಕೆ NHRC ನೋಟಿಸ್
ಹೊಸದಿಲ್ಲಿ: ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲು ‘ಮಂತ್ರವಾದಿ’(Magician) ಎನ್ನಲಾದ ವ್ಯಕ್ತಿಯೊಬ್ಬನನ್ನು ಮಹೋಬ ಜಿಲ್ಲೆಯ ಸರಕಾರಿ ಶಾಲೆಯೊಂದರ ಆಡಳಿತವು ಕರೆಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (NHRC)ವು ಶುಕ್ರವಾರ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ನೀಡಿದೆ.
ಡಿಸೆಂಬರ್ 20ರಂದು, 15 ವಿದ್ಯಾರ್ಥಿನಿಯರು ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಅಸ್ವಸ್ಥರಾದರು. ಆಗ ಶಾಲಾ ಆಡಳಿತವು ಅವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಓರ್ವ ಮಂತ್ರವಾದಿಯನ್ನು ಕರೆಸಿಕೊಂಡಿತು ಎಂದು ‘ಆಜ್ ತಕ್’ ವರದಿ ಮಾಡಿದೆ. ಆದರೆ, ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ವರದಿಯಾಗಿದೆ.
‘ಮಂತ್ರವಾದಿ’ಯು ವಿದ್ಯಾರ್ಥಿನಿಯರಿಗೆ ‘ಚಿಕಿತ್ಸೆ’ ನೀಡುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಾಧ್ಯಮ ವರದಿಗಳ ವಿಷಯವು ನಿಜವೆಂದಾದರೆ, ವಿದ್ಯಾರ್ಥಿಗಳ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಹೇಳಿದೆ.
‘‘ಅದೂ ಅಲ್ಲದೆ, ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಊಟವನ್ನು ಪೂರೈಸಿರುವಂತೆ ಕಂಡುಬರುತ್ತದೆ. ಅದರಿಂದಾಗಿಯೇ ಅವರು ಅಸ್ವಸ್ಥರಾಗಿದ್ದಾರೆ. ಇದು ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬ ಅಭಿಪ್ರಾಯವನ್ನೂ ಆಯೋಗ ಹೊಂದಿದೆ’’ ಎಂದು ಅದು ಹೇಳಿದೆ. ‘‘ಎಲ್ಲಕ್ಕಿಂತ ಹೆಚ್ಚಾಗಿ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಬೇಕಲ್ಲದೆ, ಇಂಥ ಮೂಢನಂಬಿಕೆಗಳನ್ನು ಅವರಲ್ಲಿ ಬಿತ್ತಬಾರದು’’ ಎಂಬುದಾಗಿಯೂ NHRC ಹೇಳಿದೆ.
ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಆಯೋಗವು ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ. ‘‘ರಾಜ್ಯದಲ್ಲಿ ಇನ್ನು ಮುಂದೆ ಇಂಥ ಘಟನೆಗಳು ಮರಳದಂತೆ ನೋಡಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಥವಾ ತೆಗೆದುಕೊಳ್ಳಲಾಗುವುದು ಎನ್ನುವುದನ್ನೂ ವಿವರಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ’’ ಎಂದು ಆಯೋಗ ಹೇಳಿದೆ.