ಉತ್ತರ ಭಾರತದಲ್ಲಿ ತಾಪಮಾನ ಮತ್ತಷ್ಟು ಕುಸಿತ
ಹೊಸದಿಲ್ಲಿ: ಉತ್ತರ ಭಾರತದಲ್ಲಿ ತಾಪಮಾನ ಮತ್ತಷ್ಟು ಕುಸಿದಿದ್ದು, ತೀವ್ರ ಚಳಿ ಜನತೆಯನ್ನು ಬಾಧಿಸುತ್ತಿದೆ. ಇಡೀ ಪ್ರದೇಶದಲ್ಲಿ ದಟ್ಟ ಮಂಜು ಕವಿದಿದ್ದು, ಸೂರ್ಯರಶ್ಮಿಗೂ ತಡೆ ಉಂಟಾಗಿದ್ದು, ಹಗಲಿನ ವೇಳೆಯಲ್ಲೂ ಚಳಿಯಿಂದ ಜನ ನಡುಗುವಂತಾಗಿದೆ.
ರಾಜಧಾನಿಯಲ್ಲಿ ಗರಿಷ್ಠ ಉಷ್ಣಾಂಶ 15.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ವಾಡಿಕೆಯ ತಾಪಮಾನಕ್ಕಿಂತ 6 ಡಿಗ್ರಿಯಷ್ಟು ಕಡಿಮೆ. ಮುಂದಿನ ಒಂದೆರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರ ಪರಿಣಾಮವಾಗಿ ವಿಮಾನಯಾನ ಹಾಗೂ ರೈಲು ಪ್ರಯಾಣ ಸೇರಿದಂತೆ ಸಾರಿಗೆ ವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಜತೆಗೆ ಸೂರು ಇಲ್ಲದ ದುರ್ಬಲ ವರ್ಗದವರಿಗೆ ಚಳಿ ಮತ್ತಷ್ಟು ಬಾಧಿಸುವ ಸಾಧ್ಯತೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
"ಪಶ್ಚಿಮಾಭಿಮುಖ ಮಾರುತ ದೆಹಲಿಯಾದ್ಯಂತ ಗಂಟೆಗೆ ಸುಮಾರು 10 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ. ಮುಂಜಾನೆ ಮಂಜಿನ ಪದರ ಮರೆಯಾಗದೇ ಇರುವುದರಿಂದ ಸೂರ್ಯ ಕಿರಣಕ್ಕೆ ತಡೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಗಲಿನ ವೇಳೆಯೂ ನಡುಗುವ ಚಳಿಯ ಅನುಭವವಾಗುತ್ತಿದೆ. ನಿಧಾನವಾಗಿ ತಾಪಮಾನ ಏರಿಕೆಯಾಗುವ ಮುನ್ನ ಒಂದೆರಡು ದಿನಗಳ ಕಾಲ ಇದೇ ವಾತಾವರಣ ಇರಲಿದೆ" ಎಂದು ಸ್ಕೈಮೆಟ್ ವೆದರ್ನ ಹವಾಮನ ಮತ್ತು ಮುನ್ಸೂಚನೆ ವಿಭಾಗದ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ.
ಪಶ್ಚಿಮ ಭಾರತದ ರಾಜಸ್ಥಾನದಿಂದ ಪಂಜಾಬ್ವರೆಗೆ ಶೀತಗಾಳಿ ಬೀಸುತ್ತಿದ್ದು, ಹರ್ಯಾಣ ದೆಹಲಿ ಮತ್ತು ಆಗ್ನೇಯ ಉತ್ತರಪ್ರದೇಶಕ್ಕೂ ಇದು ವ್ಯಾಪಿಸಿದೆ. ಕನಿಷ್ಠ ತಾಪಮಾನ 3 ರಿಂದ 7 ಡಿಗ್ರಿ ಇರುವ ಸಾಧ್ಯತೆ ಇದ್ದು, ಡಿಸೆಂಬರ್ ಕೊನೆಯ ವೇಳೆಗೆ ಇದು 7 ರಿಂದ 10 ಡಿಗ್ರಿಗೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಎಂ.ಮಹೋಪಾತ್ರ ಅಭಿಪ್ರಾಯಪಟ್ಟಿದ್ದಾರೆ.