ತ್ರಿಪುರಾ: ಇನ್ನೊಬ್ಬ ಬಿಜೆಪಿ ಶಾಸಕ ರಾಜೀನಾಮೆ
ಹೊಸದಿಲ್ಲಿ: ಬಿಜೆಪಿ ಶಾಸಕ ದಿಬಾಚಂದ್ರ ಹ್ರಂಗಖವಲ್ ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷ ತಮ್ಮ ಶಾಸಕ ಸ್ಥಾನ ತ್ಯಜಿಸಿದ ಆಡಳಿತ ಮೈತ್ರಿಕೂಟದ ಏಳನೇ ವ್ಯಕ್ತಿ ಇವರಾಗಿದ್ದಾರೆ.
ಧಲೈ ಜಿಲ್ಲೆಯ ಕರಂಚೆರ್ರ ಕ್ಷೇತ್ರದ ಶಾಸಕರಾಗಿದ್ದ ದಿಬಾಚಂದ್ರ ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ನಡೆಯಲಿವೆ.
ಈ ಹಿಂದೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿಬಾಚಂದ್ರ 2018 ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ವಲಸೆ ಹೋಗಿದ್ದರು.
ಇದೀಗ ರಾಜೀನಾಮೆ ನಂತರ ಪ್ರತಿಕ್ರಿಯಿಸಿದ ಅವರು ತಮ್ಮ ಮುಂದಿನ ನಡೆಯ ಕುರಿತು ನಿರ್ಧರಿಸಿಲ್ಲ ಆದರೆ ರಾಜಕೀಯ ವ್ಯಕ್ತಿಯಾಗಿರುವುದರಿಂದ ರಾಜಕೀಯದಲ್ಲಿ ಉಳಿಯುವುದಾಗಿ ತಿಳಿಸಿದ್ದಾರೆ.
ದಿಬಾಚಂದ್ರ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕ ಆಶಿಶ್ ಕುಮಾರ್ ಸಹಾ ಕೂಡ ಕಾಣಿಸಿಕೊಂಡಿದ್ದಾರೆ. ಇವರು ಕೂಡ ಈ ವರ್ಷ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಯುವ ಕಾಂಗ್ರೆಸ್ ನಾಯಕ ಬಪ್ತು ಚಕ್ರವರ್ತಿ ಹಾಗೂ ಪಕ್ಷ ವಕ್ತಾರ ಪ್ರಶಾಂತ ಭಟ್ಟಾಚಾರ್ಯ ಕೂಡ ದಿಬಾಚಂದ್ರ ಜೊತೆಗಿದ್ದರು.
ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರ ಈ ಕುರಿತು ನಿರ್ಧಾರ ಕೈಗೊಂಡಾಗ ಎಲ್ಲರಿಗೂ ತಿಳಿಯುತ್ತದೆ ಎಂದರು.
ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಹಿರಿಯ ರಾಜಕಾರಣಿ ಸುದೀಪ್ ರಾಯ್ ಅವರ ಸಮೀಪವರ್ತಿಯಾಗಿದ್ದಾರೆ ದಿಬಾಚಂದ್ರ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸುಬ್ರತಾ ಚಕ್ರವರ್ತಿ, ದಿಬಾಚಂದ್ರ ಅವರ ಆರೋಗ್ಯ ಸಮಸ್ಯೆ ಆವರ ರಾಜೀನಾಮೆಗೆ ಒಂದು ಕಾರಣವಾಗಿರಬಹುದು ಎಂದಿದ್ದಾರೆ.