ರಾಜಸ್ಥಾನ: ಬಾಲಕಿಯ ಮೇಲೆ ಅತ್ಯಾಚಾರ; ಆರೋಪಿ ಮಹಂತ ಸರ್ಜುದಾಸ್ ಬಂಧನ
ಐಪುರ,ಡಿ.29: ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿ 17 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪದಲ್ಲಿ ಮಹಂತನೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿ ಮಹಂತ ಸರ್ಜುದಾಸ್ ಮಹಾರಾಜ್ ನನ್ನು ಐಪುರದಲ್ಲಿರುವ ಆತನ ಆಶ್ರಮದಿಂದ ಬಂಧಿಸಲಾಗಿದೆಯೆಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂಚಲ್ ಮಿಶ್ರಾ(Chanchal Mishra) ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸರ್ಜು ಮಹಾರಾಜ್ ಆತನ ಆಶ್ರಮದಲ್ಲಿ ತನ್ನ ಮೇಲೆ ಅತ್ಯಾಚಾರಗೈಯುತ್ತಿದ್ದಾನೆಂದು ಸಂತ್ರಸ್ತ ಬಾಲಕಿಯು ಮಂಡಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಬಂಧನದ ಬಳಿಕ ಮಹಂತನನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆತನಿಗೆ ಮ್ಯಾಜಿಸ್ಟ್ರೇಟರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಆರೋಪಿ ವಿರುದ್ಧ ಪೊಸ್ಕೊ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ 376ನೇ ಸೆಕ್ಷನ್ನಡಿ ಪ್ರಕರಣ ದಾಖಲಿಸಲಾಗಿದೆಯೆಂದು ಮಿಶ್ರಾ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸಂತ್ರಸ್ತೆಯ ತಾಯಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ಈ ಕೃತ್ಯದ ಹಿಂದೆ ಸುರ್ಜದಾಸ್ ಕೈವಾಡವಿದೆಯೆಂದು ಆಕೆ ಆರೋಪಿಸಿರುವುದಾಗಿ ಮಿಶ್ರಾ ಹೇಳಿದರು. ಸರ್ಜುದಾಸ್ ಮಹಾರಾಷ್ಟ್ರ, ಅಯೋಧೆ ಹಾಗೂ ಬದರಿನಾಥ್ ಸೇರಿದಂತೆ ಐದು ಕಡೆಗಳಲ್ಲಿ ಆಶ್ರಮಗಳನ್ನು ನಡೆಸುತ್ತಿದ್ದಾನೆ.