ಉತ್ತರಾಖಂಡದಲ್ಲಿ 4,000 ಮನೆಗಳು, ಶಾಲೆಗಳು, ಮಸೀದಿಗಳ ತೆರವು ವಿರುದ್ಧ ಅರ್ಜಿ: ನಾಳೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ
ಹಲ್ದ್ವಾನಿ/ಹೊಸದಿಲ್ಲಿ: ಹಲ್ದ್ವಾನಿಯಲ್ಲಿ 4,000 ಮನೆಗಳು, ಶಾಲೆಗಳು, ಮಸೀದಿಗಳಿರುವ 29 ಎಕರೆ ರೈಲ್ವೇ ಭೂಮಿಯನ್ನು ತೆರವು ಮಾಡುವಂತೆ ಉತ್ತರಾಖಂಡ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.
ಹಲ್ದ್ವಾನಿಯಲ್ಲಿರುವ 4,000 ಮನೆಗಳ ನಿವಾಸಿಗಳು ಪ್ರತಿಭಟನೆ, ಪ್ರಾರ್ಥನೆ ಮುಂದುವರಿಸಿದ್ದು, ತಾವು ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಈ ಪ್ರದೇಶದಲ್ಲಿ ಮನೆಗಳಲ್ಲದೆ ನಾಲ್ಕು ಸರಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, ಒಂದು ಬ್ಯಾಂಕ್, ಎರಡು ಓವರ್ಹೆಡ್ ನೀರಿನ ಟ್ಯಾಂಕ್ಗಳು, 10 ಮಸೀದಿಗಳು ಹಾಗೂ ನಾಲ್ಕು ದೇವಾಲಯಗಳು, ಅಂಗಡಿಗಳಿದ್ದು ಇವುಗಳನ್ನು ಕಳೆದ ಕೆಲವು ದಶಕಗಳಿಂದ ನಿರ್ಮಿಸಲಾಗಿದೆ. ನಾವು ಇದನ್ನು ಲೀಸ್ ನಲ್ಲಿ ಪಡೆದಿದ್ದೇವೆ ಎಂದು ಅರ್ಧದಷ್ಟು ಕುಟುಂಬಗಳು ಹೇಳುತ್ತಿವೆ.
ಸುದೀರ್ಘ ವ್ಯಾಜ್ಯದ ನಂತರ ಡಿಸೆಂಬರ್ 20 ರ ನ್ಯಾಯಾಲಯದ ಆದೇಶವನ್ನು ಅನುಸರಿಸಿ ಜಿಲ್ಲಾಡಳಿತವು ದಿನ ಪತ್ರಿಕೆಗಳಲ್ಲಿ ಜನವರಿ 9 ರೊಳಗೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕೆಂದು ಜನರಿಗೆ ನೋಟಿಸ್ ನೀಡಿದೆ.
ತೆರವು ಕಾರ್ಯಾಚರಣೆ ತಡೆಯಲು ನಿವಾಸಿಗಳು ಕ್ಯಾಂಡಲ್ ಮೆರವಣಿಗೆ, ಧರಣಿ ಹಾಗೂ ಪ್ರಾರ್ಥನೆಗಳನ್ನು ಮುಂದುವರೆಸಿದ್ದಾರೆ. ಅಧಿಕಾರಿಗಳು ಸ್ಥಳದ ತಪಾಸಣೆ ನಡೆಸಿದ್ದಾರೆ.